ದೇಶ

ಮಕ್ಕಳ ಅಂತ್ಯಕ್ರಿಯೆಗೆ ಒಪ್ಪಿದ ದಲಿತ ಕುಟುಂಬ; ಸಿಬಿಐ ತನಿಖೆಗೆ ಆದೇಶ

Sumana Upadhyaya

ಫರಿದಾಬಾದ್: ಸಜೀವ ದಹನಕ್ಕೊಳಗಾದ ಇಬ್ಬರು ದಲಿತ ಮಕ್ಕಳ ಪೋಷಕರು ಶವಗಳನ್ನು ದಹನಗೊಳಿಸಲು ಇದೀಗ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಹರ್ಯಾಣ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ ಎಂದು ಫರಿದಾಬಾದ್ ಕ್ಷೇತ್ರದ ಸಂಸದ ಕೃಷ್ಣನ್ ಪಾಲ್ ಗುರ್ಜಾರ್ ಘೋಷಿಸಿದ್ದಾರೆ.

ದೆಹಲಿ ಸಮೀಪ ಹರ್ಯಾಣ ಸಮೀಪ ಗ್ರಾಮವೊಂದರಲ್ಲಿ ದಲಿತ ಕುಟುಂಬದ ಇಬ್ಬರು ಮಕ್ಕಳನ್ನು ನಿನ್ನೆ ಸಜೀವ ದಹನಗೊಳಿಸಲಾಗಿತ್ತು. ಇದರಿಂದ ಕುಪಿತಗೊಂಡ ಮಕ್ಕಳ ಪೋಷಕರು ಮತ್ತು ಸ್ಥಳೀಯರು ಇಂದು ಬೆಳಗಿನವರೆಗೆ ರಾಷ್ಟ್ರೀಯ ಹೆದ್ದಾರಿ ಮೇಲೆ ಶವಗಳನ್ನಿರಿಸಿ ರಸ್ತೆ ತಡೆ ನಡೆಸಿದ್ದರು. ಅಲ್ಲದೆ ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ಮಕ್ಕಳ ಶವಗಳನ್ನು ಹೊತ್ತು ಮೆರವಣಿಗೆ ಸಾಗಿದ್ದರು.

ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಮಕ್ಕಳ ಕುಟುಂಬದವರ ಮನವೊಲಿಸಿ ದಹನಕ್ಕೆ ಕೊನೆಗೂ ಒಪ್ಪಿಸುವಲ್ಲಿ ಯಶಸ್ವಿಯಾದರು.ಸ್ಥಳಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ, ಪ್ರಧಾನಿ ಮೋದಿ ಸರ್ಕಾರವನ್ನು ಆರೋಪಿಸಿದ್ದರು. ಸ್ಥಳಕ್ಕೆ ಹರ್ಯಾಣದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಆಗಮಿಸುವುದರಲ್ಲಿದ್ದರು. ಆದರೆ ಪ್ರತಿಭಟನೆ ತೀವ್ರವಾದ್ದರಿಂದ ಪರಿಸ್ಥಿತಿಯನ್ನು ಅರಿತು ಸ್ಥಳಕ್ಕೆ ಆಗಮಿಸಲಿಲ್ಲ.

ಹರ್ಯಾಣದ ಸೋನ್ ಪೇಡ್ ಗ್ರಾಮದಲ್ಲಿ ನಿನ್ನೆ ಮೇಲ್ವರ್ಗದವರು ದಲಿತರ ಮನೆಗೆ ಆಗಮಿಸಿ ಮನೆಯ ಹೊರಗಿನಿಂದ ಚಿಲಕ ಜಡಿದು ಬೆಂಕಿ ಹಚ್ಚಿದ್ದರು. ಇದರಲ್ಲಿ ಎರಡೂವರೆ ವರ್ಷದ ವೈಭವ್ ಮತ್ತು 11 ತಿಂಗಳ ದಿವ್ಯ ಎಂಬ ಇಬ್ಬರು ಮಕ್ಕಳು ಸಜೀವವಾಗಿ ಸಾವನ್ನಪ್ಪಿದ್ದರು. ಮಕ್ಕಳ ತಂದೆ-ತಾಯಿಯಿಬ್ಬರೂ ತೀವ್ರ ಗಾಯಗೊಂಡಿದ್ದಾರೆ.

ಇದೀಗ ಗ್ರಾಮಸ್ಥರು ಹೇಳುವ ಪ್ರಕಾರ, ಈ ದಲಿತ ಕುಟುಂಬಕ್ಕೆ ಒಂದು ವರ್ಷದಿಂದ ಮೇಲ್ಜಾತಿಯವರೊಂದಿಗೆ ಕಲಹವಿದ್ದು, ಆಗಾಗ ಜಗಳವಾಗುತ್ತಿತ್ತು. ಈ ಬಗ್ಗೆ ಮಾಹಿತಿಯಿದ್ದ ಪೊಲೀಸರು ಕಳೆದ ಒಂದು ವರ್ಷದಿಂದ ದಲಿತ ಕುಟುಂಬಕ್ಕೆ ರಕ್ಷಣೆ ನೀಡುತ್ತಿದ್ದರು. ಇದೀಗ ದಲಿತರ ರಕ್ಷಣೆಗೆ ನಿಯೋಜಿಸಿದ್ದ ಎಂಟು ಮಂದಿ ಪೊಲೀಸರನ್ನು ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಪ್ರಕರಣ ಸಂಬಂಧ 11 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದ್ದು, ಇದುವರೆಗೆ 4 ಮಂದಿಯನ್ನು ಬಂಧಿಸಲಾಗಿದೆ. ಉಳಿದವರು ತಪ್ಪಿಸಿಕೊಂಡಿದ್ದಾರೆ.

SCROLL FOR NEXT