ದೇಶ

ಅನುಪಮ್ ಖೇರ್ ಎನ್ ಐಟಿ ಭೇಟಿ ತಡೆದ ಶ್ರೀನಗರ ಪೊಲೀಸ್

Mainashree
ಶ್ರೀನಗರ: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ ಐಟಿ)ಗೆ ಭೇಟಿ ನೀಡಲು ತೆರಳಿದ್ದ ಅನುಪಮ್ ಖೇರ್ ಅವರನ್ನು ಶ್ರೀನಗರ ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆದಿದ್ದಾರೆ. 
ಇತ್ತೀಚೆಗೆ ಎರಡು ವಿದ್ಯಾರ್ಥಿಗಳ ಗುಂಪಿನ ನಡುವೆ ಸಂಘರ್ಷಣೆ ನಡೆದಿತ್ತು. ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ನೀಡುವ ಸಲುವಾಗಿ ಅನುಪಮ್ ಖೇರ್ ಶ್ರೀನಗರಕ್ಕೆ ತೆರಳಿದ್ದರು. 
ಆದರೆ, ಇದಕ್ಕೆ ಅಲ್ಲಿನ ಪೊಲೀಸರು ತಡೆ ನೀಡಿದ್ದಾರೆ. ಪರಿಸ್ಥಿತಿ ಸರಿಯಿಲ್ಲದ ಕಾರಣ ಭದ್ರತೆ ದೃಷ್ಟಿಯಿಂದ ನೀವು ದೆಹಲಿಗೆ ವಾಪಸ್ಸಾಗಬೇಕು ಎಂದು ಹೇಳಿ ಅನುಪಮ್ ಖೇರ್ ಅವರನ್ನು ಪೊಲೀಸರು ತಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ತೆರಳಿದ್ದ ಅನುಪಮ್ ಖೇರ್ ಮತ್ತೆ ದೆಹಲಿಗೆ ವಾಪಸ್ಸಾಗಿದ್ದಾರೆ. ನಾನು ಎನ್ ಐಟಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಬೇಕೆಂದಿದ್ದೇನೆ. ಜೊತೆಗೆ ಅವರಿಗೆ ಉಡುಗೊರೆಯನ್ನು ತಂದಿದ್ದೇನೆ. ಸಮಸ್ಯೆಯನ್ನು ಉಂಟು ಮಾಡಲು ಎನ್ ಐಟಿಗೆ ಭೇಟಿ ನೀಡುತ್ತಿಲ್ಲ ಎಂದು ಅನುಪಮ್ ಖೇರ್ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಮಾತುಗಳನ್ನು ಪೊಲೀಸರಿಗೆ ಹೇಳಿದೆ. ಜೊತೆಗೆ ನಿರ್ಬಂಧ ಹೇರಿರುವ ಬಗ್ಗೆ ಆದೇಶ ಪ್ರತಿ ತೋರಿಸಿ ಎಂದು ಕೂಡ ಕೇಳಿದೆ. ಆದರೆ ಅವರು ಅದಕ್ಕೆ ಅವಕಾಶ ನೀಡಲಿಲ್ಲ. ನನ್ನ ಸಂಬಂಧಿಕರ ಮನೆ ಹಾಗೂ ಕೀರ್ ಭವಾನಿ ದೇವಾಲಯಕ್ಕೂ ಭೇಟಿ ನೀಡಲು ಅವಕಾಶ ನೀಡಲಿಲ್ಲ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.
SCROLL FOR NEXT