ಅಮೃತಸರ: ಅಮೃತಸರದ ಬೈರೋವಾಲ್ ಪ್ರದೇಶದ ಅತ್ತಾರಿ ಗಡಿಭಾಗದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ ವ್ಯಕ್ತಿಯೊಬ್ಬನನ್ನು ಭಾರತದ ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ನುಸುಳುಕೋರರು ಭಾರತಕ್ಕೆ ನುಸುಳಲು ಯತ್ನಿಸಿದಾಗ ಬಿಎಸ್ಎಫ್ ಯೋಧರು ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒಬ್ಬ ಹತನಾಗಿದ್ದು ಇನ್ನೊಬ್ಬನಿಗೆ ಗಾಯಗಳಾಗಿವೆ. ಗಾಯಾಳುವನ್ನು ಆತನ ಜತೆಗಿದ್ದವರು ಅಲ್ಲಿಂದ ಪಾಕಿಸ್ತಾನದತ್ತ ಕರೆದೊಯ್ದಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.
ಪಾಕಿಸ್ತಾನದಿಂದ ನುಸುಳಲು ಯತ್ನಿಸಿ ಗುಂಡಿಗೆ ಬಲಿಯಾದ ಆ ವ್ಯಕ್ತಿಯ ಕೈಯಲ್ಲಿ 9 ಪ್ಯಾಕೆಟ್ ಹೆರೋಯಿನ್ (ಮಾದಕವಸ್ತು) ಪತ್ತೆಯಾಗಿದೆ ಎಂದು ಬಿಎಸ್ಎಫ್ ಮೂಲಗಳು ಹೇಳಿವೆ.