ನವದೆಹಲಿ: ಜಗತ್ತಿನ ಅತ್ಯಮೂಲ್ಯ ವಜ್ರಗಳಲ್ಲಿ ಒಂದಾಗಿರುವ ಕೊಹಿನೂರ್ ವಜ್ರ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಬುಧವಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಕೊಹಿನೂರ್ ವಜ್ರ ಕುರಿತಂತೆ ಈಗಾಗಲೇ ಎದ್ದಿರುವ ವಿಚಾರ ಹಾಗೂ ಚರ್ಚೆಗಳ ಕುರಿತಂತೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲು ತೀರ್ಮಾನಿಸಿದ್ದು, ಈ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಕೊಹಿನೂರ್ ವಜ್ರ ಕುರಿತಂತೆ ಹೇಳಿಕೆ ನೀಡಿದ್ದ ಕೇಂದ್ರ ವಜ್ರವನ್ನು ಕದ್ದು ಅಥವಾ ಬಲವಂತವಾಗಿ ಒಯ್ದದ್ದಲ್ಲ. ಪಂಜಾಬ್ ನ ಅರಸರು ಅದನ್ನು ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ಕೊಟ್ಟಿದ್ದು, ಹಾಗಾಗಿ ಅದನ್ನು ವಾಪಸ್ ತರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಈ ಹೇಳಿಕೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಈ ಹಿನ್ನೆಲೆಯಲ್ಲಿ ಉಲ್ಟಾ ಹೊಡೆದಿದ್ದ ಕೇಂದ್ರವು, ಸುಪ್ರೀಂಕೋರ್ಟ್ ಗೆ ಈ ಬಗ್ಗೆ ಸರ್ಕಾರದ ನಿಲುವನ್ನು ಇನ್ನೂ ತಿಳಿಸಿಲ್ಲ. ಮಾಧ್ಯಮದಲ್ಲಿ ಈ ಬಗ್ಗೆ ತಪ್ಪು ವರದಿಗಳು ಪ್ರಕಟವಾಗಿವೆ. ವಿಚಾರ ಇನ್ನೂ ನ್ಯಾಯಾಲಯದಲ್ಲಿದೆ. ಹಾಗಾಗಿ ಈ ಬಗ್ಗೆ ಏನಾದರೂ ಹೇಳುವುದು ನ್ಯಾಯಾಲಯ ನಿಂದನೆಯಾಗುತ್ತದೆ ಎಂದು ಹೇಳಿತ್ತು.
ಇನ್ನು ವಜ್ರ ಕುರಿತಂತೆ ಭಾರತ ಸರ್ಕಾರದ ನಿಲುವು ಏನು ಎಂಬುದನ್ನು ತಿಳಿಸುವಂತೆ ಸಾಲಿಸಿಟರ್ ಜನರಲ್ ಅವರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಕೇಂದ್ರದ ನಿಲುವನ್ನು ಇನ್ನೂ ನ್ಯಾಯಾಲಯಕ್ಕೆ ತಿಳಿಸಿಲಾಗಿಲ್ಲ. ವಿಚಾರಣೆ ವೇಳೆ ಅವರು ಕೊಹಿನೂರ್ ವಜ್ರದ ಇತಿಹಾಸವನ್ನು ತಿಳಿಸಿದ್ದಾರೆ. ಇದು ಕೇಂದ್ರ ನಿಲುವು ಆಗಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರದ ನಿಲುವನ್ನು ಇನ್ನು 6 ವಾರಗಳೊಳಗಾಗಿ ತಿಳಿಸುವಂತೆ ಸೂಚನೆ ನೀಡಿತ್ತು.