ಅಜಯ್ ಕೃಷ್ಣನ್ (ಕೃಪೆ: ಫೇಸ್ಬುಕ್)
ಕೊಲ್ಲಂ: ಮಲಯಾಳಂ ಚಿತ್ರ ನಿರ್ಮಾಪಕ ಅಜಯ್ ಕೃಷ್ಣನ್ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಿರುಮುಲ್ಲವರಂ ಮಣಯಿಲ್ಕುಳಂಗರ ನಿವಾಸಿಯಾಗಿರುವ 29ರ ಹರೆಯದ ಅಜಯ್ ಅವರು ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಸಿಫ್ ಅಲಿ, ಉಣ್ಣಿ ಮುಕುಂದನ್, ಅಜು ವರ್ಗೀಸ್, ಹನಿ ರೋಸ್, ಲೆನಾ ಮೊದಲಾದವರು ತಾರಾಗಣದಲ್ಲಿರುವ ಅವಳುಡೆ ರಾವುಗಳ್ ಎಂಬ ಚಿತ್ರದ ಮೂಲಕ ಸಿನಿಮಾ ನಿರ್ಮಾಣ ರಂಗಕ್ಕೆ ಅಜಯ್ ಪಾದಾರ್ಪಣೆ ಮಾಡಿದ್ದಾರೆ.
ಶಾನಿಲ್ ಮುಹಮ್ಮದ್ ಅವರ ಚಿತ್ರಕತೆ ಮತ್ತು ನಿರ್ದೇಶನದ ಅವಳುಡೆ ರಾವುಗಳ್ ಅಜಯ್ ಎಂಟರ್ಟೇನ್ಮೆಂಟ್ ಬ್ಯಾನರ್ನಲ್ಲಿ ನಿರ್ಮಾಣಗೊಂಡಿದೆ. ಈ ಚಿತ್ರದ ಪೂರ್ವಪ್ರದರ್ಶನ ನೋಡಿದ ನಂತರ ಅಜಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಚ್ಚಿಯಲ್ಲಿ ತಮ್ಮ ಚಿತ್ರ ಅವಳುಡೆ ರಾವುಗಳ್ನ ಪೂರ್ವಪ್ರದರ್ಶನ ನೋಡಿದ ನಂತರ ಅಜಯ್ ತುಂಬಾ ಕುಗ್ಗಿ ಹೋಗಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೇಗೆ ಯಶಸ್ಸು ಗಳಿಸಬಹುದು ಎಂಬುದರ ಬಗ್ಗೆ ಅವರು ಚಿಂತಿತರಾಗಿದ್ದರು. ಈ ಬಗ್ಗೆ ಅವರು ತಮ್ಮ ಹೆತ್ತವರಲ್ಲಿಯೂ ಮಾತನಾಡಿದ್ದರು. ಪ್ರಸ್ತುತ ಸಿನಿಮಾಗೆ ರು. 4 ಕೋಟಿ ಖರ್ಚಾಗಿದ್ದು, ಅಜಯ್ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದರು. ಈ ಕಾರಣದಿಂದಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೊಲ್ಲಂ ವೆಸ್ಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೊಲೀಸರ ಪ್ರಕಾರ ಅಜಯ್ ಅವರ ಅಪ್ಪ ರಾದಾಕೃಷ್ಣನ್ ಪಿಳ್ಳೈ ಮತ್ತು ಅಮ್ಮ ಜಯಕುಮಾರಿ ಮನೆಯಲ್ಲಿದ್ದಾಗಲೇ ಅಜಯ್ ತಮ್ಮ ಕೋಣೆಯಲ್ಲಿ ಈ ಕೃತ್ಯವೆಸಗಿದ್ದಾರೆ.
ಈ ಹಿಂದೆ ಪೃಥ್ವಿರಾಜ್ ನಟಿಸಿದ್ದ 'ಮೊಮೊರೀಸ್' ಚಿತ್ರದಲ್ಲಿ ಅಜಯ್ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos