ಬಲ್ಲಿಯಾ(ಉತ್ತರ ಪ್ರದೇಶ): ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮತಪೆಟ್ಟಿಗೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹಿಂದೆ ಅನೇಕ ಯೋಜನೆಗಳನ್ನು ರಚಿಸಲಾಗಿದ್ದವೇ ಹೊರತು ಅಭಿವೃದ್ಧಿ ಅಥವಾ ಬಡತನ ನಿರ್ಮೂಲನೆ ಮಾಡಲು ಅಲ್ಲ ಎಂದು ಆರೋಪಿಸಿದ್ದಾರೆ.
ಅವರು ಇಂದು ಉತ್ತರ ಪ್ರದೇಶದ ಬಲಿಯಾದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ 'ಪ್ರಧಾನಮಂತ್ರಿ ಉಜ್ವಲ ಯೋಜನೆ'ಗೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿರುವ ಬಡವರನ್ನು ಮೇಲೆತ್ತಲು ನಮ್ಮ ಸರ್ಕಾರ ಜನಗಳನ್ನು ಭಾಗವಹಿಸುವ ಮೂಲಕ ಕೆಲಸ ಮಾಡುತ್ತಿದೆ. ಹಿಂದಿನ ಸರ್ಕಾರ ಜನರ ಮತ ಗಳಿಸುವುದನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರುತ್ತಿತ್ತೇ ಹೊರತು ಬಹುಪಾಲು ಜನರ ಹಿತ ಕಾಪಾಡುವುದು ಆಗಿರಲಿಲ್ಲ ಎಂದು ಹೇಳಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ 5 ಕೋಟಿ ಉಚಿತ ಅನಿಲ ಸಂಪರ್ಕ ಸೌಲಭ್ಯ ಕಲ್ಪಿಸಿಕೊಡಲಾಗುತ್ತದೆ.
ಮೇ 1 ಕಾರ್ಮಿಕರ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ, ಕಠಿಣ ಪರಿಶ್ರಮದಿಂದ ದೇಶದ ಉನ್ನತಿಗೆ ಸಹಕರಿಸುತ್ತಿರುವ ಕೋಟ್ಯಾಂತರ ಕಾರ್ಮಿಕರಿಗೆ ದೇಶದ ನಂಬರ್ 1 ಕಾರ್ಮಿಕನ ಶುಭಾಶಯಗಳು' ಎಂದರು.
ಜಗತ್ತಿನ ಕಾರ್ಮಿಕರು ಒಂದಾಗಿ ಎಂಬ ಘೋಷವಾಕ್ಯದ ಬದಲಿಗೆ ಕಾರ್ಮಿಕರೇ ಜಗತ್ತನ್ನು ಒಗ್ಗೂಡಿಸಿ ಎಂಬುದಾಗಬೇಕಾಗಿದೆ. ಇಂದು ಪರಿಸ್ಥಿತಿ ಬದಲಾಗಿದೆ. ಕಾರ್ಮಿಕರು ಒಗ್ಗೂಡಿ ಶ್ರಮಿಸುವ ಮೂಲಕ ಜಗತ್ತನ್ನು ಒಂದುಮಾಡಬಹುದು ಎಂದರು.
ದೇಶದ ಸಂಸದರು ಈ ಹಿಂದೆ ತಮ್ಮ ಕ್ಷೇತ್ರದಲ್ಲಿ ಕಡುಬಡವರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲು 25 ಕೂಪನ್ ಗಳನ್ನು ಪಡೆದಿದ್ದರು. ಕೆಲವರು ಇದನ್ನು ಮಾರಾಟ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಇದೀಗ 2019ರ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ದೇಶದ 5 ಕೋಟಿ ಜನರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿ ನಮ್ಮದು ಎಂದು ತಿಳಿಸಿದರು.
ದೇಶದ ಲಕ್ಷಾಂತರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕ ಸಂಬಂಧದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಅಲ್ಲದೆ ಅವರಿಗೆ ವಿಮಾ ಸೌಲಭ್ಯ, ಆರೋಗ್ಯ ಸೇವೆ, ಪಿಂಚಣಿ ವೇತನವನ್ನು ಕೂಡ ನೀಡಲಾಗುತ್ತದೆ ಎಂದರು.
ನಂತರ ಪ್ರಧಾನಿ ಸ್ವಕ್ಷೇತ್ರ ವಾರಾಣಾಸಿಗೆ ಭೇಟಿ ನೀಡಿ ಗಂಗಾ ನದಿಯಲ್ಲಿ ಸೌರ ವಿದ್ಯುತ್ ಚಾಲಿತ ದೋಣಿಗಳಿಗೆ ಚಾಲನೆ ನೀಡಲಿದ್ದಾರೆ.