ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೃತಪಟ್ಟ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಭಾವತಿ.
ಹೈದರಾಬಾದ್: ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜ ಹಾರಿಸಲು ಗೂಟ ನೆಡಲು ಗುಂಡಿ ತೋಡುತ್ತಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮೃತಪಟ್ಟರೆ ಶಾಲೆಯ ಇತರ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಮೇದಿಕೊಂಡ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಭಾನುವಾರವಾದರೂ ಕೂಡ ಇಂದು ಸ್ವಾತಂತ್ರ್ಯ ದಿನಾಚರಣೆಗೆ ವ್ಯವಸ್ಥೆ ಮಾಡಲೆಂದು ಮುಖ್ಯೋಪಾಧ್ಯಾಯಿನಿ ಪ್ರಭಾವತಿ ಶಾಲೆಗೆ ಹೋಗಿದ್ದರು. ಮಕ್ಕಳಿಗೆ ನೀಡಲೆಂದು ಚಾಕಲೇಟ್, ಸ್ವೀಟ್ಸ್, ಶಾಲೆಯಲ್ಲಿ ಅಲಂಕಾರ ಮಾಡಲೆಂದು ತ್ರಿವರ್ಣ ಮತ್ತು ಸಣ್ಣ ಧ್ವಜ ಖರೀದಿಸಿ ತಂದಿದ್ದರು. ಶಾಲಾ ಆವರಣವನ್ನು ಅಲಂಕರಿಸಲು ಮುಂದಾದಾಗ ಇತರ ನಾಲ್ವರು ಮಕ್ಕಳೂ ಟೀಚರ್ ಗೆ ಸಹಾಯ ಮಾಡುತ್ತೇವೆಂದು ಮುಂದಾದರು.
ನಿನ್ನೆ ಬೆಳಗ್ಗೆ ಸುಮಾರು 11.30ರ ಹೊತ್ತಿಗೆ ಪ್ರಭಾವತಿಯವರು, ಶಾಲಾ ಆವರಣದಲ್ಲಿ ಧ್ವಜ ಹಾರಿಸಲು ಧ್ವಜ ಸ್ಥಂಭ ನೆಡಲು ಸರಿಯಾದ ಹೊಂಡವಿಲ್ಲ ಎಂದು ಮನಗಂಡರು. ಅದಕ್ಕಾಗಿ ಕಬ್ಬಿಣದ ಕಂಬವನ್ನು ನೆಡಲು ಮಕ್ಕಳೊಂದಿಗೆ ಮುಂದಾದರು. ಆಗ ಆ ಕಬ್ಬಿಣದ ಕಂಬ ಶಾಲಾ ಆವರಣದಲ್ಲಿ ಹಾದುಹೋದ ಹೈ ಟೆನ್ಷನ್ ವಯರ್ ಗೆ ತಾಗಿ ಎಲ್ಲರಿಗೂ ಶಾಕ್ ಹೊಡೆಯಿತು ಎನ್ನುತ್ತಾರೆ ಚೆಂಗೊಮುಲ್ ಉಪ ಸಬ್ ಇನ್ಸ್ ಪೆಕ್ಟರ್ ವೈ.ಯಾದೈಯ್.
ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮುಖ್ಯೋಪಾಧ್ಯಾಯಿನಿ ಪ್ರಭಾವತಿ ಸಾವನ್ನಪ್ಪಿದರು. ಗಾಯಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥತಿ ಸ್ಥಿರವಾಗಿದೆ.
ಮುಖ್ಯೋಪಾಧ್ಯಾಯಿನಿಯವರ ಸಾವು ಗ್ರಾಮಸ್ಥರಿಗೆ ಆಘಾತವನ್ನುಂಟುಮಾಡಿದ್ದು ಸ್ವಾತಂತ್ರ್ಯ ದಿನ ಆಚರಿಸುವ ಮನಸ್ಥಿತಿಯಲ್ಲಿ ಅವರಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos