ಉತ್ತರ ಪ್ರದೇಶದ ಬಿಜ್ನೋರ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ
ಎಲೂರು: ಎಲೂರು: ರಿಯೋ ಒಲಿಂಪಿಕ್ಸ್ನ ಮಹಿಳೆಯರ ವೈಯಕ್ತಿಕ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿರುವ ಹೈದರಾಬಾದ್ ಹುಡುಗಿ ಪಿ. ವಿ. ಸಿಂಧು ಫೈನಲ್ನಲ್ಲಿ ಚಿನ್ನ ಗೆಲ್ಲಲಿ ಎಂದು ದೇಶಾದ್ಯಂತ ದೇವಾಲಯಗಳಲ್ಲಿ ಪೂಜೆ, ಹೋಮ ಹವನ, ನಮಾಜ್ ನಡೆಯುತ್ತಿದ್ದರೆ, ಅವರ ತಂದೆ ವಿ.ವಿ.ರಮಣ ಅವರು ತಮ್ಮ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಪೆಡವೆಲಗಿ ಗ್ರಾಮದಲ್ಲಿರುವ ರತ್ನಾಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಗಳು ಚಿನ್ನ ಗೆಲ್ಲಲಿ ಎಂದು ಪ್ರಾರ್ಥಿಸಿದರು. ರತ್ನಾಲಮ್ಮ ನಮ್ಮ ಕುಲ ದೇವತೆಯಾಗಿದ್ದು, ತಾಯಿ ರತ್ನಾಲಮ್ಮ ಕೃಪಾಕಟಾಕ್ಷ ಸಿಂಧು ಮೇಲಿರಲಿದೆ ಎಂದಿರುವ ರಮಣ, ಮಗಳು ಚಿನ್ನದ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಒಲಿಂಪಿಕ್ಸ್ನಲ್ಲಿ ಭಾರತದ ಚಿನ್ನದ ಪದಕದ ಬರ ನೀಗಿಸಲಿದ್ದಾರೆ ಹಾಗೂ ತಾವು ಸಿಂಧು ಗೆಲುವಿಗೆ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇಂದು ಶುಕ್ರವಾರವಾದುದರಿಂದ ಮುಸ್ಲಿಮ್ ಬಾಂಧವರು ಉತ್ತರ ಪ್ರದೇಶದ ಬಿಜ್ನೋರ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಇತ್ತ ಮಹಾರಾಷ್ಟ್ರದ ಮುಂಬೈಯ ದೇವಾಲಯದಲ್ಲಿ ಸ್ಪೇನ್ನ ಕೆರೊಲಿನಾ ಮರಿನ್ ವಿರುದ್ಧ ಫೈನಲ್ನಲ್ಲಿ ಚಿನ್ನದ ಪದಕ ಗೆಲ್ಲಲಿ ಎಂದು ಹೋಮ, ಹವನ ನಡೆಸಿದರು. ಒಟ್ಟಾರೆ ದೇಶದ ಪ್ರತಿಯೊಬ್ಬ ಪ್ರಜೆಯಿಂದಲೂ ಸಿಂಧು ಚಿನ್ನ ಗೆಲ್ಲಲಿ ಎಂಬ ಹಾರೈಕೆ ಕಂಡು ಬರುತ್ತಿದೆ.
ಸಂಜೆ 6.55 ಕ್ಕೆ ಪಂದ್ಯ ಆರಂಭವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos