ನವದೆಹಲಿ: ದಿನದಿಂದ ದಿನಕ್ಕೆ ಭಾರತ - ಪಾಕಿಸ್ತಾನ ನಡುವಿನ ಸಂಬಂಧ ಹಾಳಾಗುತ್ತಿದ್ದು, ಭದ್ರತೆ ಮತ್ತು ಆರ್ಥಿಕ ದೃಷ್ಟಿಯಿಂದ ಪಶ್ಚಿಮ ಭಾರತದಿಂದ(ಮುಖ್ಯವಾಗಿ ಅಹಮದಬಾದ್) ಗಲ್ಫ್ ದೇಶಗಳಿಗೆ ಪ್ರಯಾಣ ಬೆಳೆಸಲು ಪಾಕಿಸ್ತಾನ ವಾಯು ಪ್ರದೇಶ ಬಳಸುವುದನ್ನು ಬಿಟ್ಟು, ಅರಬ್ಬಿಯನ್ ಸಮುದ್ರದ ಮೂಲಕ ಹಾರಾಟ ನಡೆಸಲು ಅವಕಾಶ ನೀಡುವಂತೆ ಭಾರತೀಯ ವಿಮಾನಯಾನ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.
ಏರ್ ಇಂಡಿಯಾ, ಜೆಟ್ ಏರ್ ವೇಸ್, ಇಂಡಿಗೋ ಮತ್ತು ಸ್ಪೈಜೆಟ್ ಸಂಸ್ಥೆಗಳು ಪಾಕಿಸ್ತಾನ ಮೂಲಕ ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸುತ್ತವೆ. ಕೆಲವು ದಿನಗಳ ಹಿಂದಷ್ಟೇ ಪಾಕಿಸ್ತಾನದಿಂದ ಹಾರಾಟ ನಡೆಸುವ ನಿಗದಿಯಾಗದ ವಿಮಾನಗಳು ದೇಶಕ್ಕೆ ಮರಳಬೇಕು ಎಂದು ಭಾರತ ಕೇಳಿಕೊಂಡಿತ್ತು ಮತ್ತು ಪಾಕಿಸ್ತಾನ ಸಹ ಇದಕ್ಕೆ ಪ್ರತೀಕಾರ ತೀರಿಕೊಳ್ಳುವ ಸಾಧ್ಯತೆ ಇದೆ. ಈ ಆತಂಕದಿಂದಾಗಿ ಮತ್ತು ವೆಚ್ಚದ ದೃಷ್ಟಿಯಿಂದಲೂ ಪಾಕ್ ವಾಯು ಪ್ರದೇಶ ಬಿಟ್ಟುಬಿಡಲು ಅನುಮತಿ ನೀಡುವಂತೆ ಕೇಳಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಹಮದಾಬಾದ್ ನಿಂದ ಗಲ್ಫ್ ಗೆ ನೇರ ಮಾರ್ಗ ಬಳಸಲು ಅನುಮತಿ ನೀಡಬೇಕು ಎಂದು ಸ್ಪೈಸ್ ಜೆಟ್ ರಕ್ಷಣಾ ಮತ್ತು ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದೆ. ಪ್ರಸ್ತೂತ ಈ ಮಾರ್ಗವನ್ನು ವಾಯುಪಡೆ ಮತ್ತು ನೌಕಾಪಡೆ ಕಾಯ್ದಿರಿಸಲಾಗಿದೆ.
ಈ ವಾಯು ಮಾರ್ಗ ಸೂಕ್ಷ್ಮ ಪ್ರದೇಶವಾಗಿರುವುದರಿಂದ ರಕ್ಷಣಾ ಇಲಾಖೆ ಇನ್ನೂ ಅನುಮತಿ ನೀಡಿಲ್ಲ ಎಂದು ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ವಿಮಾನಯಾನ ಸಂಸ್ಥೆಗಳಿಂದ ತುಂಬಾ ಮನವಿಗಳು ಬರುತ್ತಿದ್ದು, ಸ್ಥಳದಿಂದ ಸ್ಥಳಕ್ಕೆ ನೇರ ಮಾರ್ಗಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos