ಲಖನೌ: ಉತ್ತರ ಪ್ರದೇಶದ ದಾದ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಇಖಲಾಕ್ ಅವರ ಕುಟುಂಬ ಸದಸ್ಯರ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಪರಿಣಾಮವಾಗಿ ಇಖಲಾಕ್ ಕುಟುಂಬಕ್ಕೆ ಸದ್ಯಕ್ಕೆ ರಿಲೀಫ್ ಸಿಕ್ಕಂತಾಗಿದೆ.
ಗೋಮಾಂಸವನ್ನು ಮನೆಯಲ್ಲಿ ಶೇಖರಿಸಿಟ್ಟು, ಸೇವಿಸಿದ್ದಾರೆ ಎಂಬ ಆರೋಪದ ಮೇಲೆ ಉದ್ರಿಕ್ತ ಜನಸಮೂಹ ಮೊಹಮ್ಮದ್ ಇಖಲಾಕ್ ಅವರನ್ನು ಚಚ್ಚಿ ಸಾಯಿಸಿದ್ದರು.
ಗೋಮಾಂಸ ಶೇಖರಿಸಿಟ್ಟ ಆರೋಪದ ಮೇಲೆ ಇಖಲಾಕ್ ಕುಟುಂಬ ಸದಸ್ಯರ ವಿರುದ್ಧ ಕೇಸು ದಾಖಲಿಸುವಂತೆ ಇತ್ತೀಚಿಗೆ ಸೆಶನ್ಸ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಇಖಲಾಕ್ ಅವರ ಕುಟುಂಬದವರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಸೆಶನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವ ಮೂಲಕ ಇಖಲಾಕ್ ಕುಟುಂಬದವರ ಬಂಧನ ಸದ್ಯಕ್ಕೆ ಆಗದಂತೆ ನೋಡಿಕೊಂಡಿದೆ.
ಇಖಲಾಕ್ ಅವರ ತಾಯಿ, ಪತ್ನಿ, ಪುತ್ರಿ ಹಾಗೂ ಪುತ್ರರನ್ನು, ಸೆಶನ್ಸ್ ಕೋರ್ಟ್ ಆದೇಶದ ಬಳಿಕ, ಆರೋಪಿಗಳೆಂದು ಹೆಸರಿಸಿ ಎಫ್ಐಆರ್ ದಾಖಲಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos