ಚಂಡೀಗಢ: ಗಡಿ ಪ್ರದೇಶದಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಓರ್ವ ವ್ಯಕ್ತಿಯನ್ನು ಬಿಎಸ್ಎಫ್ ಹತ್ಯೆ ಮಾಡಿದೆ. ಪಂಜಾಬ್ ನ ಉತ್ತರ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು ಪಾಕಿಸ್ತಾನದ ವ್ಯಕ್ತಿಯ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ.
ಪಠಾಣ್ ಕೋಟ್ ಜಿಲ್ಲೆಯ ಬಳಿ ಇರುವ ಬಾಮಿಯಲ್ ವಲಯದಲ್ಲಿ ಘಟನೆ ನಡೆದಿದ್ದು, ಪಂಜಾಬ್ ನ ಅಮೃತ್ ಸರದಲ್ಲಿ ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ಪ್ರಾರಂಭವಾದ ಬೆನ್ನಲ್ಲೇ ಪಾಕಿಸ್ತಾನದ ವ್ಯಕ್ತಿ ಭಾರತದೊಳಗೆ ನುಸುಳಲು ಯತ್ನಿಸಿದ್ದಾನೆ. ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ನಡೆಯುತ್ತಿರುವ ಪ್ರದೇಶದಿಂದ ಕೇವಲ 100 ಕಿಮಿ ದೂರದಲ್ಲಿ ಈ ಘಟನೆ ನಡೆದಿದೆ.
ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಲು ಅಂತಾರಾಷ್ಟ್ರೀಯಲ್ಲಿ ನಾಯಕರು ಪಂಜಾಬ್ ಗೆ ಭೇಟಿ ನೀಡಿದ್ದು, ರಾಜ್ಯದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಗಡಿಯನ್ನು ದಾಟಿ ಒಳಬಂದ ಪಾಕಿಸ್ತಾನದ ವ್ಯಕ್ತಿಗೆ ಎಚ್ಚರಿಕೆ ನೀಡಿದರೂ ಸಹ ಅದನ್ನು ಲೆಕ್ಕಿಸದೇ ನುಗ್ಗಿದ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಬಿಎಸ್ಎಫ್ ತಿಳಿಸಿದ್ದು, ಗಡಿ ಪ್ರದೇಶದಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.