ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಬಂಧಿಸಲಾಗಿರುವ ವಾಯುಪಡೆ ಮಾಜಿ ಮುಖ್ಯಸ್ಥರನ್ನು ಸಿಬಿಐ ಡಿ.10 ರಂದು ಕೋರ್ಟ್ ಗೆ ಹಾಜರುಪಡಿಸಲಿದೆ.
ಹಗರಣವೊಂದರ ಸಂಬಂಧ ಬಂಧನಕ್ಕೊಳಗಾಗಿರುವ ಸೇನೆಯ ಮೊದಲ ಮಾಜಿ ಮುಖ್ಯಸ್ಥ ತ್ಯಾಗಿಯವರಾಗಿದ್ದು, ತ್ಯಾಗಿಯವರ ಅವರ ಸಹೋದರ ಸಂಬಂಧಿ ಸಂಜೀವ್ ತ್ಯಾಗಿ ಹಾಗೂ ಗೌತಮ್ ಖೇತನ್ ಅವರನ್ನು ಸಿಬಿಐ ದೆಹಲಿಯಲ್ಲಿ ಬಂಧಿಸಿದೆ.
ಎಸ್ ಪಿ ತ್ಯಾಗಿ ಮತ್ತು ಅವರ ಸಹೋದರ ಸಂಬಂಧಿಗಳು ಸೇರಿ ಒಟ್ಟು 13 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು, ತ್ಯಾಗಿ ಅವರು ಅಗಸ್ಟಾ ವೆಸ್ಟ್ಲ್ಯಾಂಡನ್ನು ಹರಾಜುದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅನುಕೂಲವಾಗುವಂತೆ, ಹೆಲಿಕಾಪ್ಟರ್ನ ಹಾರಾಟದ ಮಿತಿಯನ್ನು 6,000 ಮೀ.ನಿಂದ 4500 ಮೀ.ಗಳಿಗೆ (15,000 ಅಡಿಗಳು) ಇಳಿಸಿದರು. ಇದಕ್ಕೆ ಪ್ರತಿಯಾಗಿ ತ್ಯಾಗಿ ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಆರೋಪವನ್ನು ಅವರ ವಿರುದ್ಧ ಮಾಡಲಾಗಿದೆ.
ತ್ಯಾಗಿ ಅವರ ಬಂಧನ ವಿಳಂಬವಾಗಿರುವುದನ್ನು ಪ್ರಶ್ನಿಸಿರುವ ಜೆಡಿಯು ಹಗರಣದಲ್ಲಿ ತ್ಯಾಗಿಯವರ ಹೆಸರು ಹಿಂದಿನಿಂದಲೂ ಕೇಳಿಬಂದಿತ್ತು. ಆದರೆ ಈಗ ಬಂಧನವಾಗಿದೆ. ಈ ಹಿಂದೆಯೇ ಏಕೆ ಅವರನ್ನು ಬಂಧಿಸಿರಲಿಲ್ಲ ಎಂದು ಪ್ರಶ್ನಿಸಿದೆ.