ದೇಶ

ಸೇವಾ ಹಿರಿತನ ವಿವಾದ: ರಾವತ್ ನೇಮಕ ಸಮರ್ಥಿಸಿಕೊಂಡ ಕೇಂದ್ರ

Manjula VN

ನವದೆಹಲಿ: ಸೇನಾ ಮುಖ್ಯಸ್ಥರ ನೇಮಕ ಕುರಿತಂತೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಲೆ.ಜ. ಬಿಪಿನ್ ರಾವತ್ ಅವರನ್ನು ಭೂಸೇನೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಸೇನೆಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿ ರಾವತ್ ಅವರನ್ನು ನೇಮಿಸಿರುವುದಕ್ಕೆ ವಿರೋಧ ಪಕ್ಷಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ರಾವತ್ ಅವರನ್ನು ನೇಮಿಸಿರುವುದರ ಹಿಂದೆ ಏನಾದರೂ ಉದ್ದೇಶವಿದೆಯೇ? ಬಲವಾದ ಕಾರಣಗಳೇನಾದರೂ ಇವೇಯೇ ಎಂಬುದರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕಿದೆ ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು.

ಸರ್ಕಾರದ ಕ್ರವೇ ಪ್ರಶ್ನಾರ್ಹವಾಗಿದೆ ಎಂದು ಸಿಪಿಐ ಹೇಳಿತ್ತು. ಈ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ್ದ ಬಿಜೆಪಿ ರಕ್ಷಣಾ ಇಲಾಖೆಯ ನೇಮಕಗಳಿಗೆ ಸಂಬಂಧಿಸಿದ ವಿಚಾರಗಳನ್ನು ರಾಜಕೀಯಗೊಳಿಸಬಾರದು ಎಂದು ಹೇಳಿತ್ತು.

ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರ ಇದೀಗ ಸ್ಪಷ್ಟನೆ ನೀಡಿದ್ದು, ರಾವತ್ ಅವರ ನೇಮಕಾತಿಯನ್ನು ಸಮರ್ಥಿಸಿಕೊಂಡಿದೆ. ಎಲ್ಲಾ ಅರ್ಹತೆಗಳನ್ನು ಪರಿಗಣಿಸಿಯೇ ಈ ನೇಮಕವನ್ನು ಮಾಡಲಾಗಿದೆ. ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವ ಛಾಯಾ ಸಮರ, ಮುಂದುವರಿದಿರುವ ಉಗ್ರ ಕೃತ್ಯಗಳು, ಈಶಾನ್ಯಾದಲ್ಲಿ ಮುಂದುವರೆದಿರುವ ಸಮಸ್ಯೆಯಿಂದಾಗಿ ರಾವತ್ ಅವರನ್ನೇ ಮುಖ್ಯಸ್ಥರನ್ನಾಗಿ ಪರಿಗಣಿಸಲಾಗಿದೆ ಎಂದು ಪ್ರತಿಪಾದಿಸಿದೆ.

SCROLL FOR NEXT