ನವದೆಹಲಿ: ಗುರುವಾರ ಬೆಳಗಿನ ಜಾವ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಹಳೆ 500 ಮತ್ತು 1000ದ 31 ಲಕ್ಷ ರೂಪಾಯಿಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ವ್ಯಕ್ತಿಯ ಹಿನ್ನೆಲೆ, ಆತನಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು, ಎಲ್ಲಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದನು ಎಂಬ ಬಗ್ಗೆ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.ಪ್ರಯಾಣಿಕ ದೆಹಲಿಯಿಂದ ಒಡಿಶಾಕ್ಕೆ ಪ್ರಯಾಣಿಸಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ.
ಈ ಮಧ್ಯೆ ನಿನ್ನೆ ಬೆಳಗ್ಗೆ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಮಮೋಹನ್ ರಾವ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆ ಅಧಿಕಾರಿಗಳು ಇಂದು ಶೋಧ, ತಪಾಸಣೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.ಅವರ ಪುತ್ರ ಮತ್ತು ಅಳಿಯಂದಿರ ಮನೆ ಮೇಲೆ ಕೂಡ ದಾಳಿ ನಡೆಸಿದ್ದು 2,000ದ ಹೊಸ ನೋಟುಗಳಿರುವ 30 ಲಕ್ಷ ರೂಪಾಯಿ, 5 ಕೆಜಿ ಚಿನ್ನ, ಸುಮಾರು 5 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಅಘೋಷಿತ ಸಂಪತ್ತುಗಳು, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸರ್ಕಾರ ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ನಿಷೇಧ ಮಾಡಿದ ನಂತರ ಕಪ್ಪು ಹಣವನ್ನು ಬಿಳಿಯಾಗಿಸುವ ಅನೇಕ ಮಂದಿ ಕಾಳ ಧನಿಕರ ಪ್ರಯತ್ನ ಮುಂದುವರಿದಿದೆ. ಇದನ್ನು ತಡೆಯುವ ಪ್ರಯತ್ನವಾಗಿ ಆದಾಯ ತೆರಿಗೆ ಇಲಾಖೆ ತನ್ನ ದಾಳಿ ಮುಂದುವರಿಸಿದೆ.