ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಸಂಬಂಧಿಸಿದಂತೆ ಅಲ್ಲಿನ ರಾಜ್ಯಪಾಲರಾದ ಜ್ಯೋತಿ ಪ್ರಸಾದ್ ರಾಜ್ ಖೋವಾ ಅವರಿಗೆ ನೀಡಲಾಗಿದ್ದ ನೋಟೀಸ್ ಅನ್ನು ಸುಪ್ರೀಂಕೋರ್ಟ್ ವಾಪಸ್ ಪಡೆದಿದೆ.
ರಾಜಪಾಲರಿಗೆ ನೋಟೀಸ್ ನೀಡಿದ್ದು ತಪ್ಪು ಎಂದು ಒಪ್ಪಿಕೊಂಡಿರುವ ನ್ಯಾ.ಜೆ.ಎಸ್ ಖೆಹರ್ ನೇತೃತ್ವದ ಐವರು ನ್ಯಾಯಾಮೂರ್ತಿಗಳ ಪೀಠ ತಕ್ಷಣವೇ ನೋಟೀಸ್ ನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಿದೆ.
ಸಂವಿಧಾನದ 361ನೇ ವಿಧಿಯ ಅನ್ವಯ ರಾಜ್ಯಪಾಲರು ನ್ಯಾಯಾಲಯಗಳ ಪ್ರಕ್ರಿಯೆಯಿಂದ ಸಂಪೂರ್ಣ ವಿನಾಯಿತಿ ಹೊಂದಿರುತ್ತಾರೆ. 2006ರಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪನ್ನೂ ನೀಡಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೊಹಟಗಿ ಅವರು ನ್ಯಾಯಪೀಠದ ಗಮನಕ್ಕೆ ತಂದ ನಂತರ, ನ್ಯಾಯಾಮೂರ್ತಿಗಳು ನೋಟಿಸ್ ಹಿಂಪಡೆಯುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ನಮ್ಮಿಂದ ಎನಾದರೂ ತಪ್ಪಾಗಿದ್ದಾರೆ, ಅದನ್ನು ನಾವು ಹಿಂಪಡೆಯುತ್ತೇವೆ. ಅದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನ್ಯಾ. ಜೆ.ಎಸ್. ಕೆಹರ್ ಅವರುಳ್ಳ ಪೀಠ ಹೇಳಿದೆ.
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸಲ್ಲಿಸಿದ ವರದಿಯನ್ನು ನ್ಯಾಯಾಲಯಕ್ಕೆ 15 ನಿಮಿಷಗಳ ಒಳಗಾಗಿ ಸಲ್ಲಿಸುವಂತೆ ಅರುಣಾಚಲ ಪ್ರದೇಶದ ರಾಜ್ಯಪಾಲ ಜೆ.ಪಿ. ರಾಜಖೋವಾ ಅವರಿಗೆ ನಿರ್ದೇಶಿಸಿತ್ತು.