ದೇಶ

ಸ್ನ್ಯಾಪ್ ಡೀಲ್ ಉದ್ಯೋಗಿ ದೀಪ್ತಿ ಹಿಂದೆಬಿದ್ದಿದ್ದವನಿಂದ ಅಪಹರಣ ಸಂಚು; ಪೊಲೀಸರ ಶಂಕೆ: ಐವರ ಬಂಧನ

Sumana Upadhyaya

ಗಜಿಯಾಬಾದ್: ಸ್ನ್ಯಾಪ್ ಡೀಲ್ ಉದ್ಯೋಗಿ ದೀಪ್ತಿ ಸರ್ನಾ ಅವರ ಅಪಹರಣಕ್ಕೆ ಸಂಬಂಧಪಟ್ಟಂತೆ ಗಜಿಯಾಬಾದ್ ಪೊಲೀಸರು ಸೋಮವಾರ ಐದು ಮಂದಿಯನ್ನು ಬಂಧಿಸಿದ್ದು, ಅಪಹರಣದ ಹಿಂದೆ ಅವಳ ಹಿಂದೆ ಬಿದ್ದಿದ್ದವನ ಕೈವಾಡವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಪಹರಣಕಾರರು ಮೊದಲೇ ಒಳಸಂಚು ರೂಪಿಸಿ ದೀಪ್ತಿಯನ್ನು ಅ ಪಹರಿಸಿರಬಹುದು. ಅದರಲ್ಲಿ ಒಬ್ಬ ದೀಪ್ತಿಯನ್ನು ಪ್ರೀತಿಸುತ್ತಿದ್ದನು. ಅದು ಏಕಮುಖ ಪ್ರೀತಿಯಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪ್ತಿಯ ಅಪಹರಣ ಮತ್ತು ಆರೋಪಿಗಳ ಕುರಿತು ಸಂಪೂರ್ಣ ವಿವರಗಳನ್ನು ಪೊಲೀಸರು ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ವಿವರಿಸಲಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಸಂಪೂರ್ಣ ಘಟನೆಯ ಒಳಸಂಚುಗಾರ ದೇವೇಂದರ್ ದೀಪ್ತಿಯೆಡೆಗೆ ಆಕರ್ಷಿತನಾಗಿದ್ದನು. ಅವನ ವಿರುದ್ಧ ಈಗಾಗಲೇ ಅನೇಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಶಾರೂಖ್ ಖಾನ್ ಚಿತ್ರ ದರ್ ನ ಮನೋವಿಕೃತ ಪಾತ್ರದಿಂದ ಪ್ರೇರಿತನಾದ ದೇವೇಂದರ್ ಮನೋವ್ಯಾಕುಲತೆ ಹೊಂದಿದ ವ್ಯಕ್ತಿ. ಆತ ದೀಪ್ತಿಯನ್ನು ಅಪಹರಿಸಲು ಯೋಜನೆ ರೂಪಿಸಿದ್ದನು.

ಅಪಹರಣಕಾರರು ದೀಪ್ತಿಯನ್ನು ಗಜಿಯಾಬಾದ್ ನಲ್ಲಿ ಅಪಹರಿಸಿದ್ದರು. ಆದರೆ ಆಕೆಗೆ ಯಾವುದೇ ತೊಂದರೆ ಕೊಟ್ಟಿರಲಿಲ್ಲ. ಆಹಾರ ನೀಡಿ ಚೆನ್ನಾಗಿ ನೋಡಿಕೊಂಡಿದ್ದರು. ಯಾವುದೇ ಬೇಡಿಕೆಯಿಟ್ಟಿಲ್ಲ, ಹೀಗಾಗಿ ದೀಪ್ತಿ ಅಪಹರಣಕಾರರ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದ್ದಾಳೆ.

ಕಳೆದ ಬುಧವಾರ ಸ್ನಾಪ್ ಡೀಲ್ ಉದ್ಯೋಗಿ ದೀಪ್ತಿ ಸರ್ನಾ ಗಜಿಯಾಬಾದ್ ನ ವೈಶಾಲಿ ಮೆಟ್ರೋ ನಿಲ್ದಾಣದ ಬಳಿ ಆಫೀಸಿನಿಂದ ಮನೆಗೆ ಹೋಗಲು ಆಟೋಗೆ ಹತ್ತಿ ಕುಳಿತಾಗ ಅದರಲ್ಲಿದ್ದ ಇತರ ನಾಲ್ವರು ಆಕೆಯನ್ನು ಅಪಹರಿಸಿದ್ದರು. ದೀಪ್ತಿ ಶುಕ್ರವಾರ ಯಾವುದೇ ತೊಂದರೆಯಾಗದೆ ಮನೆಗೆ ವಾಪಾಸಾಗಿದ್ದಳು.

SCROLL FOR NEXT