ದೇಶ

ನೇಮಕಾತಿ ಹಗರಣ: ದಿಗ್ವಿಜಯ್ ಸಿಂಗ್ ಭೋಪಾಲ್ ನ್ಯಾಯಾಲಯಕ್ಕೆ ಹಾಜರು

Srinivasamurthy VN

ಭೋಪಾಲ್: ಸುಮಾರು 22 ವರ್ಷಗಳಷ್ಟು ಹಳೆಯ ಮಧ್ಯಪ್ರದೇಶ ಸರ್ಕಾರದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಕಾಂಗ್ರೆಸ್ ಹಿರಿಯ  ಮುಖಂಡ ದಿಗ್ವಿಜಯ್ ಸಿಂಗ್ ಅವರು ಶನಿವಾರ ಭೋಪಾಲ್ ನ್ಯಾಯಾಲಯದ ಮುಂದೆ ಹಾಜರಾದರು.

ಈ ಹಿಂದೆ ನ್ಯಾಯಾಲಯದ ಕಲಾಪಕ್ಕೆ ಗೈರಾದ ಹಿನ್ನಲೆಯಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ವಾರಂಟ್ ಜಾರಿಯಾಗಿತ್ತು. ಈ ಹಿನ್ನಲೆಯಲ್ಲಿ ಅವರು ಇಂದು ಭೋಪಾಲ್  ನ್ಯಾಯಾಲದ ಮುಂದೆ ಹಾಜರಾಗಿದ್ದರು. ಇದಕ್ಕೂ ಮೊದಲು ಅಂದರೆ ಶುಕ್ರವಾರ ಈ ಬಗ್ಗೆ ಮಾತನಾಡಿದ್ದ ದಿಗ್ವಿಜಯ್ ಸಿಂಗ್ ಅವರು, ಪ್ರಕರಣದಲ್ಲಿ ನಾನು  ತಪ್ಪಿಸ್ಥನಾಗಿದ್ದರೆ ಅಥವಾ ನನ್ನ ಬಂಧನ ಅನಿವಾರ್ಯವಾಗಿದ್ದರೆ ಪೊಲೀಸರು ನನ್ನನ್ನು ಬಂಧಿಸಬಹುದು. ನಾಳೆ ನಾನು ನ್ಯಾಯಾಲಯದ ಮುಂದೆ ಶರಣಾಗಲಿದ್ದು,  ದೆಹಲಿಯಲ್ಲಿನ ನನ್ನ ಪ್ರಮುಖ ಕಾರ್ಯಗಳನ್ನು ಸ್ಥಗಿತಗೊಳಿಸಿ ಭೋಪಾಲ್ ಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು.

ಸುಮಾರು 22 ವರ್ಷಗಳಷ್ಟು ಹಳೆಯ ಪ್ರಕರಣ ಇದಾಗಿದ್ದು, ವ್ಯಾಪಂ ಹಗರಣದಲ್ಲಿ ಸಿಲುಕಿ ಪರದಾಡುತ್ತಿರುವ ಸರ್ಕಾರಕ್ಕೆ ಈ ಪ್ರಕರಣದ ವಿಚಾರಣೆ ಮುಖ್ಯವಾಗಿದೆ.  ಇದೇ ಕಾರಣಕ್ಕೆ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ. ಅಂದು ನಡೆದ ನೇಮಕಾತಿ ಪ್ರಕ್ರಿಯೆ ಸಚಿವಾಲಯದ ಮೂಲಕ ನಡೆದಿದ್ದೇ ಹೊರತು ಏಕವ್ಯಕ್ತಿಯಿಂದಲ್ಲ  ಎಂದು ದಿಗ್ವಿಜಯ್ ಸಿಂಗ್ ಅರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ಕಳೆದ ವರ್ಷ ಜಹಾಂಗಿರ್ ಬಾದ್ ಪೊಲೀಸರು ನೇಮಕಾತಿ ಹಗರಣ ಸಂಬಂಧ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಮಾಜಿ ಸ್ಪೀಕರ್ ಶ್ರೀನಿವಾಸ್ ತಿವಾರಿ  ಮತ್ತು ಇತರೆ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣ ಸಂಬಂಧ ಈವರೆಗೂ ಸುಮಾರು 24 ಮಂದಿಯನ್ನು ಬಂಧಿಸಲಾಗಿದ್ದು, ಅವರ ವಿರುದ್ಧ  ಫೋರ್ಜರಿ, ಪಿತೂರಿ, ಮೋಸ, ಸರ್ಕಾರಿ ಕಚೇರಿಯ ದುರ್ಬಳಕೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿಯೂ ಈ ಎಲ್ಲ 24  ಮಂದಿ ವಿರುದ್ಧ ದೂರು ಹೇರಲಾಗಿದೆ.

SCROLL FOR NEXT