ರಾಯ್ಪುರ: 125 ಕೋಟಿ ಭಾರತೀಯರು ತಮ್ಮ ನಿರ್ಧಿಷ್ಟ ಗುರಿ ಸಾಧಿಸುವುದಕ್ಕೆ ಬದ್ಧವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ರಾಯ್ಪುರದಲ್ಲಿ ನಡೆದ 20ನೇ ರಾಷ್ಟ್ರೀಯ ಯುವಜನೋತ್ಸವ ಉದ್ದೇಶಿಸಿ ಮಾತನಾಡಿದ ಮೋದಿ, ಪ್ರತಿಯೊಬ್ಬರೂ ಪರಸ್ಪರರ ಸಂಪ್ರದಾಯಗಳು ಮತ್ತು ಅಭಿಪ್ರಾಯಗಳನ್ನು ಗೌರವಿಸಬೇಕು, ಪರಸ್ಪರ ಗೌರವ ಇಲ್ಲದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಇಡೀ ಜಗತ್ತು ಈಗ ನಮ್ಮ ಕಡೆ ವಿಶ್ವಾಸದಿಂದ ನೋಡುತ್ತಿದ್ದೆ. ನಮ್ಮದು ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ದೇಶ. ಇದೇ ನಮ್ಮ ರಾಷ್ಟ್ರದ ಶಕ್ತಿ. ಸೌಹಾರ್ದತೆಯೇ ನಮ್ಮ ಬಲ ಎಂದು ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಯುವಜನತೆಗೆ ಕಿವಿ ಕಿವಿ ಮಾತು ಹೇಳಿದ್ದಾರೆ.
ನಾವು ಸೌಹಾರ್ದತೆಯನ್ನು ಮೈಗೂಡಿಸಿಕೊಳ್ಳದಿದ್ದರೆ, ದೇಶದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ದುಡಿಯಲು ಸಾಧ್ಯವಿಲ್ಲ. ಏಕತೆ ಮತ್ತು ಸೌಹಾರ್ದತೆ ಇಲ್ಲದಿದ್ದರೆ ಹಾಗೂ ಪರಸ್ಪರರ ಸಂಪ್ರದಾಯಗಳು ಮತ್ತು ಅಭಿಪ್ರಾಯಗಳನ್ನು ಗೌರವಿಸಿದಿದ್ದರೆ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ದೇಶದಲ್ಲಿ ಶಾಂತಿ ನಲೆಸುವಂತೆ ಮಾಡಬೇಕು ಎಂದು ಮೋದಿ ತಿಳಿಸಿದರು.