ದೇಶ

ಟ್ಯುಟಿಕಾರನ್ ಕರಾವಳಿಯಲ್ಲಿ 45 ಕಿರು ತಿಮಿಂಗಿಲ ಸಾವು

Mainashree
ಟ್ಯುಟಿಕಾರನ್: ಅಪರೂಪದ ಘಟನೆಯೊಂದರಲ್ಲಿ ತಮಿಳುನಾಡಿನ ಟ್ಯುಟಿಕಾರನ್ ಸಮೀಪದ ತಿರುಚೆಂಡೂರು ಕಡಲ ತೀರದಲ್ಲಿ 45ಕ್ಕೂ ಹೆಚ್ಚು ಕಿರು ತಿಮಿಂಗಿಲಗಳು ಮೃತಪಟ್ಟಿವೆ.
ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಕಡಲ ತೀರಕ್ಕೆ ನೂರಾರು ಕಿರು ತಿಮಿಂಗಿಲಗಳು ಅಪ್ಪಳಿಸಿದವು. ಸ್ಥಳೀಯ ಮೀನುಗಾರರ ಆಹೋರಾತ್ರಿ ಪ್ರಯತ್ನದ ಫಲವಾಗಿ ಬಹುತೇಕ ಕಡಲಿಗೆ ಮರಳಿವೆ. ಆದರೆ, 45 ಮೀನುಗಳು ಸತತ ಪ್ರಯತ್ನದ ಬಳಿಕವೂ ಮತ್ತೆ ದಡಕ್ಕೆ ಬಂದು, ಮೃತಪಟ್ಟಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತಿರುಚೆಂಡೂರು ತೀರದ ಕಲ್ಲಮೊಝಿಯಿಂದ ಅಲಂತಲೈವರೆಗಿನ ಪ್ರದೇಶದಲ್ಲಿ ಈ ಬೆಳವಣಿಗೆ ನಡೆದಿದ್ದು, ಸ್ಥಳಕ್ಕೆ ಟ್ಯುಟಿಕಾರನ್ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ಇಷ್ಟೊಂದು ಪ್ರಮಾಣದ ತಿಮಿಂಗಿಲ ಸಾವಿನ ಕಾರಣ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಮನಾಥಪುರಂನ ಮನ್ನಾರ್ ಕೊಲ್ಲಿಯ ಮರೈನ್ ನ್ಯಾಷನಲ್ ಪಾರ್ಕ್‍ನ ತಜ್ಞರ ತಂಡ ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ಅಧ್ಯಯನ ಕೈಗೊಂಡಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಮಾಜಿ ನಿರ್ದೇಶಕ ಕೆ ವೆಂಕಟರಾಮನ್ ಪ್ರಕಾರ, ತಿಮಿಂಗಿಲ, ಡಾಲ್ಫಿನ್ಸ್ ಮತ್ತಿತರ ಸಮುದ್ರ ಸಸ್ತನಿಗಳು ಗುಂಪಿನ ಮುಂದಾಳು ನೇತೃತ್ವದಲ್ಲಿ ಜೀವನ ನಡೆಸುತ್ತವೆ.
ಆದರೆ, ಭೂಕಂಪ ಮತ್ತಿತರ ಸಮುದ್ರದಾಳದ ಭೌಗೋಳಿಕ ಬದಲಾವಣೆ ಗಳಾದಾಗ ಇಡೀ ಗುಂಪು ಚದುರಿಬಿಡುತ್ತದೆ. ಅಂತಹ ಸಂದರ್ಭದಲ್ಲಿ ಭೀತಿಯಿಂದ ಆಘಾತ ಕ್ಕೊಳಗಾಗುವ ಈ ಜೀವಿಗಳು ದಿಕ್ಕಾಪಾಲಾಗಿ ದಡಕ್ಕೆ ಅಪ್ಪಳಿಸಿ ಆತ್ಮಹತ್ಯೆಗೆ ಶರಣಾಗುತ್ತವೆ, 
ಕಾಕತಾಳೀಯವೆಂದರೆ, ಇಂಡೋನೇಷ್ಯಾ ಮತ್ತು ಫಿಲಿಫೈನ್ಸ್‍ನಲ್ಲಿ ಸೋಮವಾರವೇ 6.5ಕ್ಕಿಂತ ಹೆಚ್ಚಿನ ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿತ್ತು.
SCROLL FOR NEXT