ನವದೆಹಲಿ: ಭಯೋತ್ಪಾದನಾ ಕಾರ್ಯಾಚರಣೆಯಲ್ಲಿ ಹಲವಾರು ಮಂದಿ ಸೈನಿಕರ ಪ್ರಾಣ ಉಳಿಸಿದ್ದ ಭಾರತೀಯ ಸೇನೆಯ ಶ್ವಾನ ದಳ 26 ವರ್ಷಗಳ ನಂತರ ಈ ಬಾರಿಯ ಗಣರಾಜ್ಯ ದಿನದ ಪಥಸಂಚಲನದಲ್ಲಿ ಭಾಗವಹಿಸಲಿವೆ.
ಸೇನೆಯ 36 ಶ್ವಾನಗಳು ಈ ವರ್ಷ ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಸೇನೆಯಲ್ಲಿ ಸಾವಿರದ 200 ಲ್ಯಾಬ್ರೊಡಾರ್ ಮತ್ತು ಜರ್ಮನ್ ಶೆಫರ್ಡ್ ನಾಯಿಗಳಿವೆ.
ನಮ್ಮ ದೇಶ ರಕ್ಷಣೆಯಲ್ಲಿ, ಭಾರತೀಯ ಸೇನೆಯಲ್ಲಿ ಯೋಧರ ಸೇವೆ, ಪಾತ್ರ ಎಷ್ಟು ಮುಖ್ಯವೋ ಹಾಗೆಯೇ ಶ್ವಾನಗಳೂ ಅಷ್ಟೇ ಮುಖ್ಯವಾದದ್ದು. ಮಾನ್ಸಿ ಎಂಬ 4 ವರ್ಷದ ಲ್ಯಾಬ್ರೊಡಾರ್ ನಾಯಿ ಮತ್ತು ಅದರ ಮಾಲಿಕ ಬಶೀರ್ ಅಹ್ಮದ್ ಕಳೆದ ಆಗಸ್ಟ್ ನಲ್ಲಿ ಟಾಂಗ್ದಾರ್ ವಲಯದಲ್ಲಿ ಗಡಿ ರೇಖೆಯ ಎತ್ತರದ ಪ್ರದೇಶದಲ್ಲಿ ಶತ್ರುಗಳೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಘಟನೆಯನ್ನು ಭಾರತೀಯನು ಮರೆಯಲು ಸಾಧ್ಯವಿಲ್ಲ.
ಯುದ್ಧ ಶ್ವಾನ ತರಬೇತಿ ಶಾಲೆ ನಮ್ಮ ದೇಶದಲ್ಲಿ ಮಾರ್ಚ್ 1, 1960ರಲ್ಲಿ ಮೀರತ್ ನಲ್ಲಿ ಪ್ರಾರಂಭವಾಗಿತ್ತು. ಶ್ವಾನಗಳು ಮತ್ತು ಅದರ ತರಬೇತುದಾರರಿಗೆ ವಿಶೇಷ ಕೆಲಸಗಳಾದ ಸ್ಫೋಟಕಗಳ ಪತ್ತೆ, ಹುದುಗಿಟ್ಟ ಸಿಡಿಮದ್ದು ಪತ್ತೆಪಚ್ಚುವಿಕೆ, ಟ್ರ್ಯಾಕಿಂಗ್, ಕಾವಲು ಮೊದಲಾದವುಗಳಿಗೆ ಮೂಲ ಮತ್ತು ಸುಧಾರಿತ ತರಬೇತಿಗಳನ್ನು ಕುದುರೆ ಸವಾರಿ ಹಾಗೂ ಪಶುವೈದ್ಯ ದಳದ (RVC) ಕೇಂದ್ರ ಹಾಗೂ ಮಹಾವಿದ್ಯಾಲಯ ನೀಡುತ್ತದೆ. ಸೇನೆಯ ಶ್ವಾನಗಳು ಇದುವರೆಗೆ ಶೌರ್ಯ ಚಕ್ರ ಪ್ರಶಸ್ತಿ, ಆರು ಸೇನಾ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಸೇನಾಪಡೆಯ ಮುಖ್ಯ ಧ್ಯೇಯ 'ಪಶು ಸೇವಾ ಅಶ್ಮಕಮ್ ಧರ್ಮ್' ಎಂದು. ಸೇನೆಯಿಂದ ನಿವೃತ್ತಿಗೊಂಡು ವಯಸ್ಸಾದ ನಾಯಿ, ಕುದುರೆ ಮತ್ತು ಹೇಸರಗತ್ತೆಗಳನ್ನು ಕೊಲ್ಲಲಾಗುತ್ತದೆ ಎಂದು ಮಾಹಿತಿ ಹಕ್ಕು ಕಾಯ್ದೆಯಿಂದ ತಿಳಿದುಬಂದ ಬಳಿಕ ಸಾರ್ವಜನಿಕರಿಂದ, ಪ್ರಾಣಿ ಪ್ರಿಯರಿಂದ ವ್ಯಾಪಕ ಟೀಕೆ ಕೇಳಿಬಂದಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬಳಿಕ ಕಳೆದ ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರ ಇನ್ನು ಅರು ತಿಂಗಳೊಳಗೆ ನಿಯಮವನ್ನು ರೂಪಿಸುವುದಾಗಿ ದೆಹಲಿ ಹೈಕೋರ್ಟ್ ಗೆ ತಿಳಿಸಿತ್ತು.
ಈ ಬಗ್ಗೆ ಅಂತಿಮ ವರದಿ ಬರಬೇಕಾಗಿದ್ದು, ರೋಗದಿಂದ ಬಳಲುತ್ತಿರುವ ವಯಸ್ಸಾದ ನಾಯಿ, ಕುದುರೆ, ಹೇಸರಗತ್ತೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಸ್ವಯಂ ಪ್ರೇರಿತವಾಗಿ ಕೊಲ್ಲುವುದನ್ನು ಭಾರತೀಯ ಸೇನೆ ನಿಲ್ಲಿಸಿದೆ. ಭಾರತೀಯ ಸೇನಾಪಡೆ ನಾಯಿಗಳನ್ನು ಬಾಂಬ್ ಗಳನ್ನು ಮೂಸಲು, ಶತ್ರುಗಳನ್ನು ಭೇದಿಸಲು, ರಹಸ್ಯ ಸ್ಥಳಗಳನ್ನು ಪತ್ತೆಹಚ್ಚಲು ಮತ್ತು ಸಾಕ್ಷಿಗಳನ್ನು ತರುವಲ್ಲಿ ಬಳಸಿಕೊಳ್ಳಲಾಗುತ್ತದೆ.