ದೇಶ

ಇಂದಿನಿಂದ ಪ್ರಾಧ್ಯಾಪಕರ ಉಪವಾಸ ಸತ್ಯಾಗ್ರಹ

Manjula VN

ನವದೆಹಲಿ: ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆ ಖಂಡಿಸಿ ಹೈದರಾಬಾದ್ ನಲ್ಲಿ ಎಸ್ ಸಿ ಮತ್ತು ಎಸ್ ಟಿ ಪ್ರಾಧ್ಯಾಪಕರು ಗುರುವಾರದಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಕುಲಪತಿ ಅಪ್ಪಾರಾವ್ ಮತ್ತು ಪ್ರಭಾರ ಕುಲಪತಿ ಪ್ರೊ.ವಿಪಿನ್ ಶ್ರೀವಾಸ್ತವ ರಾಜಿನಾಮೆ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಪ್ರಭಾರ ಕುಲಪತಿ ನಿವಾಸದ ಎದುರು ಹಲವು ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದ್ದಲ್ಲದೆ, ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಪ್ರೊ.ಶ್ರೀವಾಸ್ತವ ಭೇಟಿ ನೀಡಿ ಸಂಘಟನೆಗಳ ಜತೆ ಮಾತುಕತೆಗೆ ಮುಂದಾದರು. ಆದರೆ, ವಿ.ಸಿ ಗೋ ಬ್ಯಾಕ್ ಎಂಬ ಘೋಷಣೆಯಿಂದಾಗಿ ಅವರು ಹಿಂತಿರುಗಬೇಕಾಯಿತು.

ಬಳಿಕ ಮಾತನಾಡಿದ ಅವರು ಪ್ರತಿಭಟನಾ ಸ್ಥಳದಲ್ಲಿ ಹೆಚ್ಚು ಕಾಲ ನಿಲ್ಲಬಹುದಿತ್ತು. ಆದರೆ ಅವರು ನನ್ನ ಮಾತು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಹಿಂತಿರುಗಿ ಬರಬೇಕಾಯಿತು ಎಂದಿದ್ದಾರೆ.

ದೆಹಲಿಯಲ್ಲಿ ಕೂಡ ರೋಹಿತ್ ವೆಮುಲ ಸಾವು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಈ ವಿಚಾರದಲ್ಲಿ ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಕಡೆಗೆ ಮತ್ತೆ ಮೆರವಣಿಗೆ ಮೂಲಕ ತೆರಳಲು ಪ್ರಯತ್ನಿಸಿದ ವಿದ್ಯಾರ್ಥಿ ಸಂಘಟನೆಗಳ ಸದಸ್ಯರನ್ನು ತಡೆಯಲಾಯಿತು. ಜತೆಗೆ 60 ಮಂದಿಯನ್ನು ವಶಕ್ಕೆ ಪಡೆಯಲಾಯಿತು.

ಮರು ಪೋಸ್ಟ್ ಮಾರ್ಟಂ ಗೆ ಹೈ ಕೋರ್ಟ್ ಆದೇಶ

ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡಿನ ವಿಲ್ಲುಪುರಂ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಪೈಕಿ ಒಬ್ಬಳ ದೇಹದ ಮರು ಮರಣೋತ್ತರ ಪರೀಕ್ಷೆಗೆ ಮದ್ರಾಸ್ ಹೈ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಆಕೆಯ ತಂದೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಜ.23ರಂದು ಎಸ್.ವಿ.ಎಸ್.ಮೆಡಿಕಲ್ ಕಾಲೇಜಿನ ಯೋಗ ಮತ್ತು ನ್ಯಾಚುರೋಪತಿ ವಿಭಾಗದ ಮೂವರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ವೇಳೆ ಘಟನೆಯನ್ನು ಖಂಡಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಚೆನ್ನೈನಲ್ಲಿ ರಾಜಭವನದತ್ತ ತೆರಳುತ್ತಿದ್ದವು. ಸುಮಾರು 40 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆ ಮಾಡಿದ್ದಾರೆ.

SCROLL FOR NEXT