ಚೆನ್ನೈ: ಭಾರತ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿ ಫೇಸ್ ಬುಕ್ ನಲ್ಲಿ ಫೊಟೋ ಅಪ್ಲೋಡ್ ಮಾಡಿದ್ದ ತಮಿಳುನಾಡು ಮೂಲದ ಯುವಕನ ವಿರುದ್ಧ ಭಾನುವಾರ ಎಫ್ ಐಆರ್ ದಾಖಲಾಗಿದೆ.
ತಮಿಳುನಾಡಿನ ನಾಗಪಟ್ಟಣಂ ಮೂಲದ ದಿಲೀಪನ್ ಮಹೇಂದ್ರನ್ ಎಂಬಾತನ ವಿರುದ್ಧ ಇದೀಗ ಪುಲಿಯನ್ ತೊಪೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಹಿಂದೂ ಮಕ್ಕಳ್ ಮುಣ್ಣಣಿ ಸಂಸ್ಥೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ದಿಲೀಪನ್ ಮಹೇಂದ್ರನ್ ವಿರುದ್ಧ ಐಪಿಸಿ ಸೆಕ್ಷನ್ 153 (ಬಿ) (ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ) ಸೆಕ್ಷನ್ 2 ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತಂದ ಆರೋಪ ಮತ್ತು ಐಟಿ ಸೆಕ್ಷನ್ 66 ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಪ್ರಸ್ತುತ ಆರೋಪಿ ದಿಲೀಪನ್ ಮಹೇಂದ್ರನ್ ಗಾಗಿ ಜಾಲಾಡುತ್ತಿರುವ ಪೊಲೀಸರು ಆತನ ಫೇಸ್ ಬುಕ್ ಖಾತೆಯಿಂದ ಸಾಕ್ಷಿಗಳನ್ನು ವಶಪಡಿಸಿಕೊಳ್ಳವ ಕಾರ್ಯದಲ್ಲಿದ್ದಾರೆ.
ಮೂಲತಃ ತಮಿಳುನಾಡು ಮೂಲದ ನಾಗಪಟ್ಟಣಂ ಮೂಲದ ದಿಲೀಪನ್ ಮಹೇಂದ್ರನ್ ತನ್ನ ಫೇಸ್ ಬುಕ್ ಖಾತೆಯಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಇಡುತ್ತಿರುವ ಫೊಟೋಗಳನ್ನು ಅಪ್ ಲೋಡ್ ಮಾಡಿದ್ದ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಖಂಡಿಸಿ ಬರೆದಿದ್ದ. ಯುವಕನ ಈ ದುರ್ವರ್ತನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಇದೇ ಪ್ರಕರಣ ಸಂಬಂಧ ದಿಲೀಪನ್ ಮಹೇಂದ್ರನ್ ವಿರುದ್ದ ಸಿಆರ್ ನವೀನ್ ಕುಮಾರ್ ಎಂಬ ಪೈಲಟ್ ದೂರು ಕೂಡ ದಾಖಲಿಸಿದ್ದರು.