ದೇಶ

ಕೇಂದ್ರ ಸಚಿವರ ಭದ್ರತಾ ವಾಹನಕ್ಕೆ ಬೈಕ್ ಡಿಕ್ಕಿ: 1 ಸಾವು, 6 ಗಾಯ

Srinivasamurthy VN

ಬಿಹಾರ: ಕೇಂದ್ರ ಸಚಿವ ಕೃಪಾಲ್ ಯಾದವ್ ಅವರ ಭದ್ರತಾ ವಾಹನವೊಂದಕ್ಕೆ ಬೈಕ್ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ 6 ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಉಜ್ವಲ ಯೋಜನೆಗೆ ಚಾಲನೆ ನೀಡುವ ಸಲುವಾಗಿ ಸಚಿವ  ರಾಮ್ ಕೃಪಾಲ್ ಯಾದವ್ ಅವರು ಪಾಟ್ನಾದ ಮಸೌರಿ ಪ್ರದೇಶಕ್ಕೆ ಹೋಗುತ್ತಿದ್ದರು. ಧನರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ ದಹನ್ ಗ್ರಾಮದ ಬಳಿ ಹೋಗುತ್ತಿದ್ದಂತೆ ಬೀರ್ ಗ್ರಾಮಕ್ಕೆ ಹೋಗುತ್ತಿದ್ದ ಯುವಕರ ಬೈಕ್ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ರಾಹುಲ್ ಕುಮಾರ್ (18) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೆ, ಸಚಿವರ 6 ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಘಟನೆ ವೇಳೆ ಗಾಯಗೊಂಡ ಭದ್ರತಾ ಸಿಬ್ಬಂದಿಗಳನ್ನು ಪಾಟ್ನಾದ ನಳಂದಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ.

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಮ್ ಕೃಪಾಲ್ ಯಾದವ್ ಅವರು, ಇದೊಂದು ದುರ್ಘಟನೆ. ಘಟನೆ ಇದ್ದಕ್ಕಿದ್ದಂತೆ ನಡೆದುಹೋಯಿತು ಎಂದು ಹೇಳಿದ್ದಾರೆ. ಅಲ್ಲದೆ, ಮೃತ ಯುವಕನ ಕುಟುಂಬಸ್ಥರ ಕುರಿತು ಸಂತಾಪ ಸೂಚಿಸಿದ್ದಾರೆ.

SCROLL FOR NEXT