ನವದೆಹಲಿ: ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಭಾರತೀಯ ರೈಲ್ವೆ ಸ್ವಯಂಪ್ರೇರಿತ ಪ್ರಯಾಣಿಕರ ವಿಮೆ ಯೋಜನೆ ಆರಂಭಿಸಲಿದ್ದು, ಪ್ರತಿ ಟಿಕೆಟ್ ಗೆ 10ರೂಪಾಯಿಗೂ ಕಡಿಮೆ ಪ್ರೀಮಿಯಮ್ ನ್ನು ಪ್ರಯಾಣಿಕರು ಕಟ್ಟಿದರೆ ಸಾಕು. ರೈಲು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ ಸಂಬಂಧಪಟ್ಟವರಿಗೆ 10 ಲಕ್ಷದವರೆಗೆ ವಿಮೆ ಸಿಗುತ್ತದೆ.
ಐಆರ್ ಸಿಟಿಸಿ ಸಾರ್ವಜನಿಕ ವಲಯ ಸಂಸ್ಥೆಯಾಗಿದ್ದು, 17 ವಿಮಾ ಕಂಪೆನಿಗಳನ್ನು ಅಖೈರುಗೊಳಿಸಿದ್ದು, ಅವುಗಳಲ್ಲಿ ನಾಳೆಯ ಹೊತ್ತಿಗೆ ಮೂರು ಕಂಪೆನಿಗಳನ್ನು ವಿಮಾ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡುವುದಕ್ಕೆ ಆಯ್ಕೆ ಮಾಡಲಾಗುವುದು.
ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಈ ವರ್ಷದ ಬಜೆಟ್ ನಲ್ಲಿ ಪ್ರಯಾಣಿಕರ ವಿಮಾ ಯೋಜನೆಯನ್ನು ಆರಂಭಿಸಲಾಗುವುದು ಎಂದು ಪ್ರಕಟಿಸಿದ್ದರು.
ಆರಂಭದಲ್ಲಿ ಯೋಜನೆಯನ್ನು ಪ್ರಾಯೋಗಿಕ ಮಾದರಿಯಲ್ಲಿ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೌಂಟರ್ ಗಳಲ್ಲಿ ಟಿಕೆಟ್ ಖರೀದಿಸುವವರಿಗೆ ಮತ್ತು ತಿಂಗಳ ಋತುವಿನ ಟಿಕೆಟ್ ಖರೀದಿಸುವವರಿಗೂ ನೀಡಲು ಇಲಾಖೆ ಚಿಂತಿಸಿದೆ.
ಈ ಯೋಜನೆಯಡಿ, ರೈಲಿನಲ್ಲಿ ಸಂಚರಿಸುವಾಗ ಪ್ರಯಾಣಿಕರು ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ ವಿಮೆ ಮಾಡಿಸಿಕೊಂಡವರಿಗೆ 10 ಲಕ್ಷ ರೂಪಾಯಿ ವಿಮಾ ಹಣ ದೊರಕಲಿದೆ. ಭಾಗಶಃ ಅಂಗವೈಕಲ್ಯ ಅಥವಾ ಗಾಯಗಳಾದಲ್ಲಿ 7.5 ಲಕ್ಷ ರೂಪಾಯಿ, ಆಸ್ಪತ್ರೆಗೆ ದಾಖಲಾದಲ್ಲಿ 5 ಲಕ್ಷ ರೂಪಾಯಿ ಮತ್ತು ಶವಗಳನ್ನು ಹೊತ್ತೊಯ್ಯಲು 10 ಸಾವಿರ ರೂಪಾಯಿ ವಿಮೆ ಸಿಗಲಿದೆ.
ಇ-ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ವಿಮೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಪ್ರಯಾಣದ ಅವಧಿ ಅಥವಾ ದೂರವನ್ನು ಹೊಂದಿಕೊಂಡು ಪ್ರೀಮಿಯಮ್ ಇರುತ್ತದೆ. ವಿಮಾ ಕಂಪೆನಿ ಯಾವುದೆಂದು ಆಯ್ಕೆ ಮಾಡಿಕೊಂಡು ವಿಮಾ ಕವರೇಜ್ ನ ತಾಂತ್ರಿಕತೆ ಕುರಿತು ಚರ್ಚಿಸಲಾಗುವುದು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾ ಮೊತ್ತವನ್ನು ಹೆಚ್ಚಿಸುವ ಸೌಲಭ್ಯವು ಪ್ರಯಾಣಿಕರಿಗೆ ಇರುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos