ದೇಶ

ಕಾಶ್ಮೀರಿ ವಿದ್ಯಾರ್ಥಿನಿಯನ್ನು ಬಂಧಿಸಿದ್ದು ಸಂಶಯದ ಮೇರೆಗೆ: ನಿರ್ಮಲ್ ಸಿಂಗ್

Manjula VN

ನವದೆಹಲಿ: ಶ್ರೀನಗರದಿಂದ ಡಾಕಾಗೆ ಪ್ರಯಾಣ ಮಾಡುತ್ತಿದ್ದ ಕಾಶ್ಮೀರಿ ವಿದ್ಯಾರ್ಥಿನಿಯನ್ನು ಬಂಧಿಸಿರುವುದು ಸಂಶಯದ ಮೇರೆಗೆ ಎಂದು ಜಮ್ಮು ಮತ್ತು ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

ವಿದ್ಯಾರ್ಥಿನಿ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಕುರಿತು ನನಗೆ ಮಾಹಿತಿ ಇಲ್ಲ. ಭದ್ರತಾ ಪಡೆಗಳು ಅವರನ್ನು ತಡೆದಿದ್ದಾರೆ ಎಂದರೆ, ಅನುಮಾನಾಸ್ಪದವಾಗಿ ಅವರು ಏನೋ ಮಾಡಿದ್ದಾರೆ. ವಿದ್ಯಾರ್ಥಿನಿಯನ್ನು ಬಂಧಿಸಿರುವುದು ಸಂಶಯದ ಮೇರೆಗೆ ಹೊರತು ಯಾವುದೇ ಕಾರಣಕ್ಕೂ ಅಲ್ಲ. ವಿಚಾರಣೆ ನಂತರ ಸ್ಪಷ್ಟನೆ ಸಿಕ್ಕಿದ ಮೇಲೆ ಆಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿಯೊಬ್ಬಳು ಬಾಂಬ್ ವೊಂದನ್ನು ಹಿಡಿದುಕೊಂಡು ಹೋಗುತ್ತಿದ್ದಳು ಎಂದು ರಾಜಧಾನಿ ದೆಹಲಿಯ ಐಜಿಐ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಹೇಳಿಕೊಂಡಿದ್ದರು. ಇದರಂತೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದ್ದ ಅಧಿಕಾರಿಗಳು ಕಾಶ್ಮೀರದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಬಂಧನಕ್ಕೊಳಪಡಿಸಿದ್ದರು.

ಬಂಧಿತ ವಿದ್ಯಾರ್ಥಿನಿ ಮೂಲತಃ ಶ್ರೀನಗರದ ರಾಜ್ಭಾಗ್ ನ ನಿವಾಸಿಯಾಗಿದ್ದಾಳೆ. ನಿನ್ನೆ ವಿದ್ಯಾರ್ಥಿನಿಯನ್ನು ಬಂಧನಕ್ಕೊಳಪಡಿಸಿದ್ದ ಪೊಲೀಸರು ಕೆಲ ಗಂಟೆಗಳ ವಿಚಾರಣೆ ನಡೆಸಿದ್ದರು.

ಮಗಳ ಬಂಧನ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದ ಆಕೆಯ ಪೋಷಕರು, ಬಾಂಗ್ಲಾದೇಶ ಮತ್ತು ಕೋಲ್ಕತಾದಲ್ಲೂ ಲಗೇಜ್ ಗಳನ್ನು ತಪಾಸಣೆ ಮಾಡಲಾಗಿತ್ತು. ಅಲ್ಲೆಲ್ಲಿಯೂ ಇಲ್ಲದ ಪ್ರಶ್ನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಏಕೆ ಬಂತು ಎಂದು ಹೇಳಿದ್ದರು. ಅಲ್ಲದೆ, ವಿಚಾರವನ್ನು ಜಮ್ಮ ಮತ್ತು ಕಾಶ್ಮೀರ ಸರ್ಕಾರದ ಗಮನಕ್ಕೆ ತಂದಿದ್ದರು.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಒಮರ್ ಅಬ್ದುಲ್ಲಾ ಅವರು, ವಿದ್ಯಾರ್ಥಿನಿಯನ್ನು ಬಂಧಿನಕ್ಕೊಳಪಡಿಸಿದ್ದರ ಹಿಂದಿರುವ ಕಾರಣವೇನು? ಪ್ರಕರಣ ಕುರಿತು ಮತ್ತಷ್ಟು ಮಾಹಿತಿಯನ್ನು ಬಹಿರಂಗಪಡಿಸಿ ಎಂದು ಹೇಳಿಕೊಂಡಿದ್ದರು.

SCROLL FOR NEXT