ಚೆನ್ನೈ: ಮಾ.3 ಬುಧವಾರ ಎರಡು ಕಾಕತಾಳಿಯ ಘಟನೆಗಳಿಗೆ ಸಾಕ್ಷಿಯಾದ ದಿನ. ಅತ್ತ ರಾಷ್ಟ್ರದ್ರೋಹದ ಆರೋಪದಡಿ ಬಂಧನವಾಗಿದ್ದ ಕನ್ಹಯ್ಯ ಕುಮಾರ್ ಗೆ ಜಾಮೀನು ದೊರೆತರೆ ಇತ್ತ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದ ಯುವಕನಿಗೂ ಜಾಮೀನು ಸಿಕ್ಕಿದೆ.
ಜಾಮೀನು ಪಡೆದು ಬಿಡುಗಡೆಯಾಗಿರುವ ದಿಲೀಪನ್ ಮಹೇಂದ್ರನ್, ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದಕ್ಕೆ ಪ್ರತಿಯೊಬ್ಬರೂ ನನ್ನನ್ನು ದೂಷಿಸುತ್ತಿದ್ದಾರೆ ಆದರೆ ಅದರ ಹಿಂದಿನ ಕಾರಣವನ್ನು ಕೇಳಲು ತಯಾರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ. ದಿಲೀಪನ್ ಮಹೆಂದ್ರನ್ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದ ಫೋಟೊ ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದ ನಂತರ ಫೆ.1 ರಂದು ಆತನನ್ನು ಬಂಧಿಸಲಾಗಿತ್ತು.
ಈಗ ಜಾಮೀನು ಪಡೆದು ಜೈಲಿನಿಂದ ವಾಪಸ್ಸಾಗಿರುವ ದಿಲೀಪನ್ ಮಹೆಂದ್ರನ್ ತಾನು ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದರ ಹಿಂದಿನ ಕಾರಣವನ್ನು ವಿವರಿಸಿದ್ದಾನೆ. ತಮಿಳುನಾಡಿನ ಮೀನುಗಾರರ ಬಂಧನದ ವಿಷಯ, ಮಿಥೇನ್ ಹೊರತೆಗೆಯುವಿಕೆ, ಕೂಡಂಕುಳಂ ಅಣುಸ್ಥಾವರದ ವಿಷಯ ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ಕೇಂದ್ರ ಸರ್ಕಾರದ ನಿಲುವು ತಮಿಳುನಾಡಿನ ಜನತೆಯ ವಿರುದ್ಧವಾಗಿದೆ ಆದ್ದರಿಂದಲೇ ನಾನು ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದೆ ಎಂದಿದ್ದಾನೆ ದಿಲೀಪನ್ ಮಹೇಂದ್ರನ್.
ಜೈಲಿನಲ್ಲಿರುವಾಗ ಪೊಲೀಸ್ ಅಧಿಕಾರಿಗಳು ತನ್ನ ಕೈ ಮುರಿಯುವಂತೆ ಥಳಿಸಿದ್ದರು ಎಂದು ಆರೋಪಿಸಿರುವ ಮಹೇಂದ್ರನ್, ನಾನು ಶೋಷಣೆಗೊಳಗಾಗಿರುವ ವರ್ಗಕ್ಕೆ ಸೇರಿದವನಾದ್ದರಿಂದ ಪೊಲೀಸರು ಈ ರೀತಿ ಥಳಿಸಿದ್ದಾರೆ. ಮೇಲ್ವರ್ಗದ ಜನರಿಗೆ ಇದೇ ರೀತಿ ಥಳಿಸಲು ಪೊಲೀಸರಿಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾನೆ.