ಲಖನೌ: ಅನಾಮಧೇಯ ಮೃತದೇಹ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲಕ್ಕೆ ಸಿಲುಕಿದ್ದ ಪೊಲೀಸರು ವಿಚಾರಣೆ ನಡೆಯುವ ಬದಲು ಗೊಂದಲ ನಿವಾರಣೆಗೆ ಮೃತದೇಹವನ್ನೇ ನದಿಗೆ ಎಸೆದಿರುವ ಘಟನೆಯೊಂದು ಲಖನೌನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಕಳೆದ ಭಾನುವಾರ ರಾತ್ರಿ ಲಖನೌವಿನ ಹಜ್ರತ್ಘಂಜ್ ಹಾಗೂ ಮಹಾನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದ ಮಧ್ಯೆ ಅನಾಮಧೇಯ ಮೃತದೇಹವೊಂದು ಪತ್ತೆಯಾಗಿತ್ತು. ಮೃತ ದೇಹವನ್ನು ಕಂಡ ಪೊಲೀಸರು ಪ್ರಕರಣ ಯಾವ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಗೊಂದಲಕ್ಕೆ ಸಿಲುಕಿಕೊಂಡರು.
ಇದರಿಂದಾಗಿ ತಲೆಕೆಡಿಸಿಕೊಳ್ಳುವುದು ಯಾಕೆ ಎಂಬ ಕಾರಣಕ್ಕೋ ಏನೋ, ತನಿಖೆ ನಡೆಸುವ ಬದಲು ಗೊಂದಲ, ಗೋಜಲುಗಳೇ ಬೇಡವೆಂದು ಎರಡೂ ಠಾಣೆಯ ಪೊಲೀಸರು ಅಲ್ಲಿನ ಮೀನುಗಾರರಿಗೆ ಮೃತದೇಹವನ್ನು ಗೋಮತಿ ನದಿತೀರಕ್ಕೆ ಎಸೆಯುವಂತೆ ತಿಳಿಸಿದ್ದಾರೆ. ಇದರಂತೆ ಮೀನುಗಾರರು ಮೃತದೇಹವನ್ನು ನದಿ ತೀರಕ್ಕೆ ಎಸೆಯುತ್ತಿರುವ ಫೋಟೋಗಳೀಗ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.