ಹೈದರಾಬಾದ್: ಕೇಂದ್ರ ಸರ್ಕಾರ ಆದಷ್ಟು ಬೇಗ ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ತರಬೇಕು ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಬುಧವಾರ ಹೇಳಿದ್ದಾರೆ.
ರೋಹಿತ್ ವೇಮುಲಾ ಆತ್ಮಹತ್ಯೆಯಂತಹ ಪ್ರಕರಣಗಳು ಭವಿಷ್ಯದಲ್ಲಿ ಸಂಭವಿಸದಂತೆ ತಡೆಯಲು ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿರುವ ಕನ್ಹಯ್ಯ ಕುಮಾರ್, ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಲು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಓರ್ವ ಪ್ರೊಪೆಸರ್ ಹಾಗೂ ಮೂವರು ಜೆಎನ್ ಯು ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಹೈದರಾಬಾದ್ ಗೆ ಭೇಟಿ ನೀಡಿರುವ ಕನ್ಹಯ್ಯ ಕುಮಾರ್, ರೋಹಿತ್ ವೇಮುಲಾ ತಾಯಿಯನ್ನು ಭೇಟಿ ಮಾಡಿದರು.
ಈ ವೇಳೆ ರೋಹಿತ್ ತಾಯಿಯನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ತಾಯಿಗೆ ಹೋಲಿಸಿದ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಜಂಟಿ ಕ್ರಿಯಾ ಸಮಿತಿ ತಮ್ಮನ್ನು ಹೈದರಾಬಾದ್ ಗೆ ಆಹ್ವಾನಿಸಿದ್ದು, ಇಂದು ಸಂಜೆ ಸಾರ್ವಜನಿಕ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
26 ವರ್ಷದ ರೋಹಿತ್ ವೇಮುಲಾ ಕಳೆದ ಜನವರಿಯಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಎಬಿವಿಪಿ ನಾಯಕನ ಮೇಲೆ ದಾಳಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ರೋಹಿತ್ ವೇಮುಲಾರನ್ನು ಹಾಸ್ಟೇಲ್ ನಿಂದ ಅಮಾನತುಗೊಳಿಸಲಾಗಿತ್ತು.