ದೇಶ

ರಕ್ತ ಚಂದನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರು ಮಂದಿ ಬಂಧನ

Sumana Upadhyaya

ಕಡಪಾ: ಸುಮಾರು 15 ಲಕ್ಷ ರೂಪಾಯಿ ಬೆಲೆಬಾಳುವ ರಕ್ತ ಚಂದನ ತುಂಡುಗಳನ್ನು ಕಳ್ಳ ಸಾಗಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಆರು ಮಂದಿಯನ್ನು ಆಂಧ್ರಪ್ರದೇಶದ ಕಡಪ ಸಮೀಪ ಮೈದುಕುರ್ ಪೊಲೀಸರು ಬಂಧಿಸಿದ್ದಾರೆ.

ಇಂದು ಮುಂಜಾನೆ ಮೈದುಕುರು ಪ್ರದೇಶದ ಬೈರವ ಕೋನ ಅರಣ್ಯ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿಸಿದ ಕಳ್ಳಸಾಗಣೆದಾರರನ್ನು ಮಾಧ್ಯಮದ ಮುಂದೆ ಹಾಜರುಪಡಿಸಿದ ಮೈದುಕುರ್ ಡಿಎಸ್ಪಿ ಎಂ.ರಾಮಕೃಷ್ಣಯ್ಯ, ಆರೋಪಿಗಳು ರಕ್ತ ಚಂದನದ ತುಂಡುಗಳನ್ನು ಕದ್ದು ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಆಧಾರದ ಮೇಲೆ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 25 ರಕ್ತ ಚಂದನ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಬಂಧಿತರಾದವರನ್ನು ಆಂಧ್ರಪ್ರದೇಶದ ಪ್ರಕಾಸಂ ಜಿಲ್ಲೆಯ ಎಸ್.ರಾತಯ್ಯ, ಕೆ.ನಾರಾಯಣ, ಪಿ.ಪ್ರಸಾದ್, ಎ.ರಾತಯ್ಯ, ಕೆ.ವೆಂಕಟರೆಡ್ಡಿ ಹಾಗೂ ಮೈದುಕುರ್ ಮಂಡಲ್ ನ ಪಿ.ವಿಷ್ಣುವರ್ಧನ ರೆಡ್ಡಿ ಎಂದು ಗುರುತಿಸಲಾಗಿದೆ.

ರಕ್ತ ಚಂದನದ ಜೊತೆ ಅದನ್ನು ಕಟ್ಟಲು ಬಳಸುತ್ತಿದ್ದ ಉಪಕರಣ, ಹಗ್ಗ ಹಾಗೂ ಸಾಗಿಸಲು ಬಳಸಿದ ಸೈಕಲನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

SCROLL FOR NEXT