ದೇಶ

ಐಫೋನ್ ಅಲ್ಲ, ಒಂದು ಸೆಲ್‌ಫೋನ್ ಕೂಡಾ ನನ್ನ ಬಳಿ ಇಲ್ಲ: ಕನಯ್ಯಾ ಕುಮಾರ್

Rashmi Kasaragodu
ಪಟನಾ:  ನಾನು ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲೇ ಪ್ರಯಾಣಿಸುತ್ತೇನೆ, ಐಫೋನ್ ಬಳಸುತ್ತೇನೆ, ಪಿಆರ್‌ಒ ನೇಮಕ ಮಾಡಿಕೊಂಡಿದ್ದೇನೆ ಎಂಬೆಲ್ಲಾ ಆರೋಪಗಳು ಸತ್ಯಕ್ಕೆ ದೂರವಾದುದು ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ಯಾ ಕುಮಾರ್ ಹೇಳಿದ್ದಾರೆ.
ನನಗೆ ಯಾರೂ ಪಿಆರ್ ಒ ಇಲ್ಲ, ಅವರನ್ನಿಟ್ಟು ಕೊಂಡರೆ ನನಗೇನು ಪ್ರಯೋಜನ?  ಜೆಎನ್‌ಯುನ 8000 ವಿದ್ಯಾರ್ಥಿ ಮತ್ತು ದೇಶದಾದ್ಯಂತವಿರುವ ಇತರರನ್ನು ಸೇರಿಸಿ ನಾನು ಆರಂಭಿಸಿದ ಚಳುವಳಿಯ ಶಕ್ತಿಯನ್ನು ಕ್ಷೀಣಗೊಳಿಸುವುದಕ್ಕಾಗಿ ಇಂಥಾ ವದಂತಿಗಳನ್ನು ಯಾರೋ ಹಬ್ಬಿಸುತ್ತಿದ್ದಾರೆ ಎಂದು ಕನಯ್ಯಾ ಹೇಳಿದ್ದಾರೆ.
ದೇಶದ್ರೋಹದ ಆರೋಪದಲ್ಲಿ ಬಂಧಿಯಾಗಿದ್ದ ಕನಯ್ಯಾ ಈಗ ಜಾಮೀನು ಸಿಕ್ಕಿ ಜೈಲಿನಿಂದ ಹೊರಬಂದಿದ್ದಾರೆ. 
ನನ್ನಲ್ಲಿ ಸೆಲ್‌ಫೋನ್ ಕೂಡಾ ಇಲ್ಲ, ಇನ್ನೆಲ್ಲಿ ಐಫೋನ್? ಕೆಲವರು ನನ್ನಲ್ಲಿ ಐಫೋನ್ ಇದೆ ಎಂದು ಹೇಳುತ್ತಿದ್ದಾರೆ. ಆಯೋಜಕರು ನನ್ನನ್ನು ಭಾಷಣ ಮಾಡಲು ಅಥವಾ ಪ್ರತಿಭಟನೆ ಮಾಡಲು ಕರೆಯುತ್ತಾರೆ. ಹಾಗೆ ಕಾರ್ಯಕ್ರಮಕ್ಕೆ ಹೋಗಿ ಬರುವ ವೆಚ್ಚವನ್ನೂ ಅವರೇ ಭರಿಸುತ್ತಾರೆ. ವಿಮಾನ ಟಿಕೆಟ್ ಖರೀದಿಸುವಷ್ಟು ದುಡ್ಡು ನನ್ನಲ್ಲಿ ಇಲ್ಲ.
ನನ್ನ ಅಮ್ಮ ಅಂಗನವಾಡಿ ಕಾರ್ಯಕರ್ತೆ, ನನ್ನ ಅಪ್ಪ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಜುಲೈ 2015ರಿಂದ ನನಗೆ ನನ್ನ ಸ್ಕಾಲರ್‌ಶಿಪ್ ಸಿಕ್ಕಿಲ್ಲ.  ಜೆಎನ್‌ಯು ವಿದ್ಯಾರ್ಥಿಗಳ ಸಹಾಯದಿಂದ ಹೇಗೋ ಬದುಕನ್ನು ಹೊಂದಿಸಿಕೊಂಡು ಹೋಗುತ್ತಿದ್ದೇನೆ. 
ನನಗೆ ರು.10,000 ದಂಡ ವಿಧಿಸಿದಾಗ ಮಹಾರಾಷ್ಟ್ರದ ಕಸಗುಡಿಸುವವರು ಮತ್ತು ಮಲಹೊರುವವರು ಅಷ್ಟು ದುಡ್ಡನ್ನು ಸಂಗ್ರಹಿಸಿ ದಂಡ ಪಾವತಿಗಾಗಿ ನೀಡುತ್ತೇವೆ ಎಂದು ಹೇಳಿದ್ದರು.
ಆದರೆ ನಾನು ಅವರಿಗೆ ಕೃತಜ್ಞತೆ ಹೇಳಿ, ನಾನು ದಂಡ ಪಾವತಿ ಮಾಡಲ್ಲ ಎಂದು ಹೇಳಿದೆ. ಅವರು ನನಗಾಗಿ ಹಣ ಸಂಗ್ರಹ ಮಾಡಿದ್ದನ್ನು ನೋಡಿದರೇ ಅರ್ಥವಾಗುತ್ತದೆ, ಹೋರಾಟದ ಹಾದಿ ಸರಿಯಾಗಿದ್ದರೆ ಜನರೂ ಸಹಾಯ ಮಾಡುತ್ತಾರೆ ಎಂಬುದು. ಭಾರತದ ಚೆಲುವು ಅಂಥದ್ದು. 
ನನ್ನ ಬ್ಯಾಂಕ್ ಅಕೌಂಟ್‌ನಲ್ಲಿ ಕೇವಲ ರು. 200 ಇದೆ. ಈ ಬಗ್ಗೆ ಯಾರು ಬೇಕಾದರೂ ಆರ್‌ಟಿಐ ಅರ್ಜಿ ಸಲ್ಲಿಸಿ ನನ್ನ ಬ್ಯಾಂಕ್ ಅಕೌಂಟ್‌ನ ಮಾಹಿತಿ ಪಡೆಯಬಹುದು.
ನಮ್ಮ ದೇಶದಲ್ಲಿನ ಕಡುಬಡವರ ಬಗ್ಗೆ, ಬಡತನದ ಬಗ್ಗೆ, ಅಸಹಾಯಕರ ಬಗ್ಗೆ ಮಾತನಾಡುವುದನ್ನು ನಾನು ಫ್ಯಾಷನ್ ಮಾಡಿಕೊಂಡಿಲ್ಲ. ನನಗೆ ಅವರ ಬಗ್ಗೆ ಕಾಳಜಿ ಇದೆ. ಆದ ಕಾರಣ ಅವರ ಬಗ್ಗೆ ಮಾತನಾಡುತ್ತೇನೆ.
ಭಾನುವಾರ ಪಟನಾಕ್ಕೆ ಆಗಮಿಸಿದ ಕನಯ್ಯಾ ಆಜಾದಿ ವಿಷಯದಲ್ಲಿ ಅಲ್ಲಿ ಭಾಷಣ ಮಾಡಿದ್ದರು. ಅದೇ ವೇಳೆ ಕನಯ್ಯಾ ಅವರಿಗೆ ಕರಿ ಪತಾಕೆ ತೋರಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
SCROLL FOR NEXT