ತಿರುವನಂತಪುರಂ: ಕೇರಳದ ಕಾನೂನು ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರ್ನಾಕುಲಂ ಜಿಲ್ಲೆಯಲ್ಲಿ ದಲಿತ ಜನಾಂಗಕ್ಕೆ ಸೇರಿದ ಕಾನೂನು ವಿದ್ಯಾರ್ಥಿನಿ ಜಿಶಾಳನ್ನು ಅತ್ಯಾಚಾರವೆಸಗಿ ಹತ್ಯೆಗೈಯಲಾಗಿತ್ತು. ಪ್ರಕರಣ ಸಂಬಂಧ ಓರ್ವ ನೆರೆಮನೆಯವನು, ಇಬ್ಬರು ವಲಸೆ ಕಾರ್ಮಿಕರು ಸೇರಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಶಾ ಅತ್ಯಾಚಾರ ಪ್ರಕರಣ ಸಂಬಂಧ 30 ಸದಸ್ಯರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಟಿ ಪಿ ಸೆಂಕುಮಾರ್ ತಿಳಿಸಿದ್ದಾರೆ.
ಜಿಶಾ ಸಂಜೆ 5.45ರ ವೇಳೆಗೆ ಅತ್ಯಾಚಾರಕ್ಕೊಳಗಾಗಿದ್ದಾಳೆ. ಜಿಶಾ ಸಂಜೆ 5 ಗಂಟೆಗೆ ನೀರು ತೆಗೆದು ಕೊಂಡು ಹೋಗಿದನ್ನು ಅಲ್ಲಿನ ಸ್ಥಳೀಯರು ನೋಡಿದ್ದಾರೆ. ಇದಾಗಿ ಅರ್ಧ ಗಂಟೆಯ ನಂತರ ಜಿಶಾಳ ಮನೆಯಿಂದ ಆರ್ತನಾದ ಕೇಳಿದೆ. ಆಕೆಯನ್ನು ಅತ್ಯಾಚಾರಗೈದ ವ್ಯಕ್ತಿ ಎಂದು ಶಂಕಿಸಲಾಗುತ್ತಿರುವವ ಅಲ್ಲಿನ ಕಾಲುವೆ ಮೂಲಕ ಹೋಗಿದ್ದು 6.05ಕ್ಕೆ. ಹೀಗೆಂದು ಅಲ್ಲಿನ ನಿವಾಸಿಗಳು ಸಾಕ್ಷ್ಯ ನುಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.