ಗಯಾ: ಜನತಾದಳ (ಸಂಯುಕ್ತ) ರಾಜಕಾರಣಿಯ ಮಗ ಪ್ರಯಾಣಿಸುತ್ತಿದ್ದ ಎಸ್ಯುವಿ ಕಾರನ್ನು ಓವರ್ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ರಾತ್ರಿ ನಡೆದಿದೆ.
ಬಿಹಾರದ ಖ್ಯಾತ ಉದ್ಯಮಿಯೊಬ್ಬರ 19ರ ಹರೆಯದ ಮಗ ಆದಿತ್ಯ ಸಚ್ದೇವ ಗುಂಡಿಗೆ ಬಲಿಯಾದ ದುರ್ದೈವಿ. ಈಗಷ್ಟೇ 12 ನೇ ತರಗತಿಯ ಪರೀಕ್ಷೆ ಮುಗಿಸಿದ್ದ ಆದಿತ್ಯ, ತನ್ನ ಗೆಳೆಯರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಜೆಡಿಯು ನಾಯಕಿ ಮನೋರಮಾ ದೇವಿ ಅವರಿಗೆ ಸೇರಿದ ರೇಂಜ್ ರೋವರ್ನ್ನು ಆದಿತ್ಯನ ಕಾರು ಓವರ್ಟೇಕ್ ಮಾಡಿತ್ತು. ಮನೋರಮಾ ದೇವಿ ಅವರು ಬಿಹಾರದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದು,ಅವರ ಪತಿ ಬಿಂದಿ ಯಾದವ್ ಕುಖ್ಯಾತ ಗೂಂಡಾ ಆಗಿದ್ದಾನೆ.
ಓವರ್ಟೇಕ್ ಮಾಡಿದ ಕೂಡಲೇ ಕಾರಿನಲ್ಲಿದ್ದ ಮನೋರಮಾ ದೇವಿ ಅವರ ಪುತ್ರ ರೋಕಿ ಮತ್ತು ಆತನ ಬಾಡಿಗಾರ್ಡ್ ನಮ್ಮ ಕಾರಿನ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ನಾವು ಬೋದ್ಗಯಾದಿಂದ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಗುಂಡಿನ ದಾಳಿ ನಡೆದ ಕೂಡಲೇ ನಾವು ಕಾರು ನಿಲ್ಲಿಸಿದೆವು. ಅವರು ನಮ್ಮನ್ನು ಕಾರಿನಿಂದ ಬಲವಂತವಾಗಿ ಹೊರಗೆಳೆದರು. ನಾವು ಅಲ್ಲಿಂದ ಹೊರಡಲನುವಾದಾಗ ಯಾರೋ ಒಬ್ಬರು ಗುಂಡು ಹಾರಿಸಿದರು ಅದು ನನ್ನ ಗೆಳೆಯನಿಗೆ ತಾಗಿತು. ಆ ಕಾರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಇದ್ದದ್ದನ್ನು ನಾನು ನೋಡಿದೆ ಎಂದು ಆದಿತ್ಯನ ಗೆಳೆಯ ಆಯುಷ್ ಹೇಳಿದ್ದಾನೆ.
ಪೊಲೀಸರು ಬಾಡಿಗಾರ್ಡ್ ರಾಜೇಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದು, ರೋಕಿ ತಲೆ ಮರೆಸಿಕೊಂಡಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos