ದೇಶ

ತಕ್ಷಣ ರಘುರಾಮ್ ರಾಜನ್ ವಜಾ ಮಾಡಿ; ಪ್ರಧಾನಿಗೆ ಸುಬ್ರಹ್ಮಣ್ಯ ಸ್ವಾಮಿ ಮತ್ತೆ ಪತ್ರ

Sumana Upadhyaya

ನವದೆಹಲಿ: ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಮತ್ತೆ ಆರು ಹೊಸ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ಅವರನ್ನು ಸೇವೆಯಿಂದ ಈ ಕೂಡಲೇ ವಜಾ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶಪಡಿಸಲು ರಘುರಾಮ್ ರಾಜನ್ ಅವರು ಹೊರಟಿದ್ದು, ಬಡ್ಡಿದರವನ್ನು ಹೆಚ್ಚಿಸಬೇಕಾದ ಅನಿವಾರ್ಯ ಸಂದರ್ಭವನ್ನು ಅವರು ತಿಳಿದಿರಬೇಕಾಗಿತ್ತು. ಅವರ ಯೋಜನೆಗಳು ಕೆಟ್ಟದಾಗಿದ್ದು, ದೇಶ ವಿರೋಧಿ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.

ಗವರ್ನರ್ ಅವರು ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದ ಅಸುರಕ್ಷಿತ ಇಮೇಲ್ ಐಡಿಯನ್ನು ಬಳಸಿಕೊಂಡು ರಹಸ್ಯ ಮತ್ತು ಸೂಕ್ಷ್ಮ ಆರ್ಥಿಕ ಮಾಹಿತಿಯನ್ನು ಕಳುಹಿಸುತ್ತಿದ್ದಾರೆ. ಮತ್ತು ಬಿಜೆಪಿ ಸರ್ಕಾರವನ್ನು ಸಾರ್ವಜನಿಕವಾಗಿ ಅವಹೇಳನ ಮಾಡುತ್ತಿದ್ದಾರೆ ಎಂದರು.

ಗವರ್ನರ್ ವಿರುದ್ಧ ಮಾಡಿರುವ ಆರು ಆರೋಪಗಳು ಸತ್ಯವಾಗಿದ್ದು, ರಾಷ್ಟ್ರದ ಹಿತಾಸಕ್ತಿಯಿಂದ ಅವರನ್ನು ಸೇವೆಯಿಂದ ವಜಾಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಅವರು, ರಘುರಾಮ್ ರಾಜನ್ ರವರು ಜವಾಬ್ದಾರಿಯುತ ಸ್ಥಾನ ಹೊಂದಿದ್ದರೂ ಕೂಡ ಅಮೆರಿಕ ಪೌರತ್ವದ ಹಸಿರು ಕಾರ್ಡನ್ನು ನವೀಕರಿಸಲು ಪ್ರವಾಸ ಮಾಡುತ್ತಿರುತ್ತಾರೆ. ಗವರ್ನರ್ ಹುದ್ದೆ ತುಂಬಾ ಜವಾಬ್ದಾರಿಯುತವಾದದ್ದು ಮತ್ತು ಸೂಕ್ಷ್ಮವಾದದ್ದು. ದೇಶದ ಬಗ್ಗೆ ಅವರಿಗೆ ಅಪಾರ ಭಕ್ತಿ ಮತ್ತು ಬೇಷರತ್ ಬದ್ಧತೆ ಹೊಂದಿರಬೇಕು, ಆದರೆ ರಘುರಾಮ್ ರಾಜನ್ ಅವರಲ್ಲಿ ಆ ಗುಣವಿಲ್ಲ ಎಂದು ದೂರಿದರು.

ಅಲ್ಲದೆ ರಾಜನ್ ಅವರು ಅಮೆರಿಕದ 30 ಸದಸ್ಯರನ್ನೊಳಗೊಂಡ ಪ್ರಾಬಲ್ಯವಿರುವ ಗುಂಪಿನ ಸದಸ್ಯರಾಗಿದ್ದಾರೆ ಎಂದರು. ಆ ಗುಂಪು ಜಾಗತಿಕ ಆರ್ಥಿಕತೆಯಲ್ಲಿ ಅಮೆರಿಕದ ಪ್ರಾಬಲ್ಯ ಪಾತ್ರದ ಬಗ್ಗೆ ಪ್ರತಿಪಾದಿಸುತ್ತದೆ.

SCROLL FOR NEXT