ನವದೆಹಲಿ: ಕೃಷಿ ಸೆಸ್, ಕಪ್ಪು ಹಣದ ಮಾಹಿತಿ ಬಹಿರಂಗ ಸೇರಿದಂತೆ ಪ್ರಸಕ್ತ ಸಾಲಿನ ಬಜೆಟ್ ನ ಹಲವಾರು ಪ್ರಸ್ತಾಪಗಳು ಬುಧವಾರದಿಂದ ಅನುಷ್ಠಾನಕ್ಕೆ ಬಂದಿದ್ದು, ಸೇವಾ ತೆರಿಗೆ ಏರಿಕೆಯಿಂದಾಗಿ ಭಾರತೀಯ ರೈಲ್ವೇ ಇಲಾಖೆಯಲ್ಲಿನ ಕೆಲವು ನಿಯಮಗಳು ಬದಲಾಗಿವೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆಬ್ರವರಿ ತಿಂಗಳಿನಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದರು. ಬಜೆಟ್ ವೇಳೆ. ಶೇ.12.36ರಷ್ಟಿದ್ದ ಸೇವಾ ತೆರಿಗೆಯನ್ನು ಶೇ.14 ಕ್ಕೆ ಹೆಚ್ಚಿಸಲಾಗಿತ್ತು. ಸೇವಾ ತೆರಿಗೆ ಏರಿಕೆಯು ಜೂನ್ 1ರಿಂದ ಅನ್ವಯವಾಗಲಿದೆ ಎಂದು ಘೋಷಣೆ ಮಾಡಲಾಗಿತ್ತು. ಇದರಂತೆ ಸೇವಾ ತೆರಿಗೆ ಇಂದಿನಿಂದ ಜಾರಿಯಾಗಿದ್ದು, ಅನೇಕ ಸೇವೆಗಳು ಇಂದಿನಿಂದ ದುಬಾರಿಯಾಗಿ ಪರಿಣಮಿಸಲಿವೆ.
ಭಾರತೀಯ ರೈಲ್ವೇ ಇಲಾಖೆಯಲ್ಲಿ ಇಂದಿನಿಂದ ಜಾರಿ ಆಗಿರುವ ಹೊಸ ಬದಲಾವಣೆಗಳು ಈ ಕೆಳಗಿನಂತಿವೆ...
- ರೈಲ್ವೆ ಇಲಾಖೆಯಲ್ಲಿ ಮುಖ್ಯವಾಗಿ ತತ್ಕಾಲ್ ಟಿಕೆಟ್ ನ ನಿಯಮದಲ್ಲಿ ಬದಲಾವಣೆ ತಂದಿದ್ದು, ತಾತ್ಕಾಲ್ ಟಿಕೆಟ್ ರದ್ದು ಮಾಡಿದರೆ ಇನ್ನು ಮುಂದೆ ಪ್ರಯಾಣಿಕರಿಗೆ ಶೇ.50ರಷ್ಟು ಹಣ ಮರುಪಾವತಿಯಾಗಲಿದೆ.
- ತತ್ಕಾಲ್ ಟಿಕೆಟ್ ಬುಕಿಂಗ್ ಸಮಯದಲ್ಲೂ ಬದಲಾವಣೆಯಾಗಿದ್ದು, ಇಂದಿನಿಂದ ತಾತ್ಕಾಲ್ ಎಸಿ ಕೋಚ್ ಗೆ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಬುಕಿಂಗ್ ಮಾಡಬಹುದಾಗಿದೆ. ಸ್ಲೀಪರ್ ಕೋಚ್ ಗೆ ಬೆಳಿಗ್ಗೆ 11 ರಿಂದ ರಾತ್ರಿ 12ರವರೆಗೆ ಬುಕಿಂಗ್ ಮಾಡಬಹುದಾಗಿದೆ.
- ಸುವಿಧಾ ರೈಲುಗಳಲ್ಲಿ ಇನ್ಮುಂದೆ ವೇಯ್ಟಿಂಗ್ ಲಿಸ್ಟ್ ಇರುವುದಿಲ್ಲ. ಕೊನೆಯಲ್ಲಿ ಪ್ರಕಟಿಸಲಾಗುತ್ತದೆ. ಖಾತರಿ ಟಿಕೆಟ್ ಹಾಗೂ ಆರ್ ಎಸಿ ಪ್ರಯಾಣಿಕರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ವೇಯ್ಟಿಂಗ್ ಲಿಸ್ಟ್ ಇರುವುದಿಲ್ಲ.
- ರೈಲ್ವೆ ಇಲಾಖೆ ವಿವಿಧ ಭಾಷೆಗಳಲ್ಲಿ ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಎಲ್ಲಾ ಭಾಷೆಗಳಲ್ಲೂ ಟಿಕೆಟ್ ಬುಕಿಂಗ್ ಅಳವಡಿಸಲಿದೆ.
- ಸುವಿಧಾ ರೈಲು ಟಿಕೆಟ್ ನ್ನು ರದ್ದು ಮಾಡುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಅರ್ಧದಷ್ಟು ಹಣವನ್ನು ಮರುಪಾವತಿ ಮಾಡಲಿದೆ.
- ಜೂನ್.1 ರಿಂದ ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳಲ್ಲಿನ ಕೋಚ್ ಗಳ ಸಂಖ್ಯೆಗಳ ಹೆಚ್ಚಾಗಲಿದ್ದು, ಈ ರೈಲುಗಳಲ್ಲಿ ಪೇಪರ್ ರಹಿತ ಟಿಕೆಟ್ ಗಳನ್ನು ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇನ್ನು ಮುಂದೆ ಈ ರೈಲುಗಳಲ್ಲಿ ಮೊಬೈಲ್ ಟಿಕೆಟ್ ಗಳು ಮಾತ್ರ ಮಾನ್ಯತೆ ಪಡೆಯಲಿದೆ.