ದೇಶ

ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನಿಗೆ ಹುತಾತ್ಮ ಪಟ್ಟ; ಕೇಜ್ರಿವಾಲ್ ವಿರುದ್ಧ ಪಿಐಎಲ್ ದಾಖಲು

Manjula VN

ನವದೆಹಲಿ: ಆತ್ಮಹತ್ಯೆ ಮಾಡಿಕೊಂಡ ಮಾಡಿ ಯೋಧ ರಾಮ್ ಕಿಶನ್ ಗ್ರೆವಾಲ್ ಅವರಿಗೆ ಹುತಾತ್ಮ ಪಟ್ಟ ನೀಡಿದ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ದೆಹಲಿ ಹೈಕೋರ್ಟ್'ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಶನಿವಾರ ದಾಖಲಾಗಿದೆ.

ಅರೆಸೈನಿಕ ಪಡೆಯ ಮಾಜಿ ಸಿಬ್ಬಂದಿಯಾಗಿರುವ ಪುರಾನ್ ಚಂದ್ ಆರ್ಯ ಎಂಬುವವರು ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾರೆಂದು ತಿಳಿದುಬಂದಿದೆ.

ಪುರಾನ್ ಚಂದ್ ಆರ್ಯ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ ರಾಮ್ ಕಿಶನ್ ಅವರಿಗೆ ದೆಹಲಿ ಸರ್ಕಾರ ಹುತಾತ್ಮ ಪಟ್ಟವನ್ನು ನೀಡಿದೆ. ದೆಹಲಿ ಸರ್ಕಾರದ ಈ ನಿರ್ಧಾರ ಹಣಕ್ಕಾಗಿ ಭವಿಷ್ಯದಲ್ಲಿ ಮತ್ತಷ್ಟು ಯೋಧರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಹುತಾತ್ಮ ಪಟ್ಟ ನೀಡುವಲ್ಲಿ ನ್ಯಾಯಾಲಯ ದೆಹಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡುವಂತೆಯೂ ಪುರಾನ್ ಚಂದ್ ಆರ್ಯ ಅವರು ಮನವಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಸಮಾನ ವೇತನ ಮತ್ತು ಸಮಾನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕೆಲ ದಿನಗಳ ಹಿಂದಷ್ಟೇ ಮಾಜಿ ಯೋಧ ರಾಮ್ ಕಿಶನ್ ಗ್ರೆವಾಲ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದರು.

ಮಾಜಿ ಯೋಧನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷ ಸಾಕಷ್ಟು ವಿರೋಧವನ್ನು ವ್ಯಕ್ತಪಡಿಸಿತ್ತು.

ಮಾಜಿ ಯೋಧನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಯೋಧನ ಕುಟುಂಬಸ್ಥರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರು.1 ಕೋಟಿ ಪರಿಹಾರ ಹಣವನ್ನು ಘೋಷಣೆ ಮಾಡಿದ್ದರು.

ದೇಶಕ್ಕಾಗಿ ಬದುಕ್ಕಿದ್ದೆ ಹಾಗೂ ದೇಶಕ್ಕಾಗಿಯೇ ಸಾವನ್ನಪ್ಪುತ್ತಿದ್ದೇನೆಂದು ಸಾವಿಗೂ ಮುನ್ನ ಮಾಜಿ ಯೋಧ ರಾಮ್ ಕಿಶನ್ ಅವರು ಹೇಳಿದ್ದಾರೆ. ಈ ಹೇಳಿಕೆ ಯಾವುದೇ ಹುತಾತ್ಮ ಯೋಧನಿಗಿಂತ ಕಡಿಮೆಯಿಲ್ಲ. ಹೀಗಾಗಿ ಹುತಾತ್ಮನೆಂದು ಕರೆಯುವ ರಾಮ್ ಕಿಶನ್ ಗೆರ್ವಾಲ್ ಕುಟುಂಬಕ್ಕೆ ರು. 1 ಕೋಟಿ ಹಣವನ್ನು ಪರಿಹಾರ ಧನವಾಗಿ ನೀಡಲಾಗುತ್ತದೆ ಎಂದು ಹೇಳಿದ್ದರು.

SCROLL FOR NEXT