ಕಲಾಪದಲ್ಲಿ ಪ್ರಸ್ತಾಪಿಸುವ ವಿಷಯಗಳ ಕುರಿತು ಕಾರ್ಯತಂತ್ರ ರೂಪಿಸಲು ಸಭೆ ಸೇರಿದ ಪ್ರತಿಪಕ್ಷಗಳ ನಾಯಕರು
ನವದೆಹಲಿ: ನಾಳೆ(ನವೆಂಬರ್ 16) ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮತ್ತು ಇತರ ಏಳು ಪ್ರತಿಪಕ್ಷಗಳು ನಿನ್ನೆ ಸಭೆ ಸೇರಿ ಜಂಟಿ ಕಾರ್ಯತಂತ್ರವನ್ನು ರೂಪಿಸಿವೆ. ನೋಟುಗಳ ಅಪಮೌಲೀಕರಣದಿಂದ ದೇಶದ ಸಾಮಾನ್ಯ ಮತ್ತು ಬಡಜನತೆಗೆ ಭಾರೀ ತೊಂದರೆಯುಂಟಾಗಿದೆ ಎಂದು ಸರ್ಕಾರವನ್ನು ತೀವ್ರ ತರಾಟೆಗೆ ಅವು ತೆಗೆದುಕೊಳ್ಳಲಿವೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭೆಯ ಕಾಂಗ್ರೆಸ್ ಉಪ ನಾಯಕ ಆನಂದ್ ಶರ್ಮಾ, ಸಂಸತ್ತಿನಲ್ಲಿ ನೋಟುಗಳ ನಿಷೇಧ ವಿಷಯವನ್ನು ಪ್ರಸ್ತಾಪಿಸಬೇಕೆಂದು ಎಲ್ಲಾ ಪಕ್ಷಗಳ ಸದಸ್ಯರು ಸಹಮತದಿಂದ ಒಪ್ಪಿಗೆ ನೀಡಿದರು ಎಂದರು.
ನಿನ್ನೆಯ ಸಭೆಗೆ ಹೆಚ್ಚಿನ ನಾಯಕರು ಗೈರು ಹಾಜರಾದ್ದರಿಂದ ಇಂದು ಅಪರಾಹ್ನ ಮತ್ತೆ ಸಭೆ ಸೇರಿ ತಮ್ಮ ಯೋಜನೆಗಳನ್ನು ಅಂತಿಮಗೊಳಿಸಲಿದ್ದಾರೆ. ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಉತ್ತರ ಪ್ರದೇಶ ಚುನಾವಣೆಯ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು, ನಿನ್ನೆಯ ಸಭೆಗೆ ಡಿಎಂಕೆ, ಎಡಿಎಂಕೆ, ಎನ್ ಸಿಪಿ, ಎಎಪಿ ಪಕ್ಷಗಳ ನಾಯಕರು ಭಾಗವಹಿಸಿರಲಿಲ್ಲ.
ಸಭೆಯಲ್ಲಿ ಹಾಜರಾಗಿದ್ದ ಜೆಡಿಯು ನಾಯಕ ಶರದ್ ಯಾದವ್, ಭೂ ಸ್ವಾಧೀನ ಕಾಯಿದೆಯಲ್ಲಿ ವಿರೋಧ ಪಕ್ಷಗಳ ನಾಯಕರೆಲ್ಲಾ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದಾಗ ಮೋದಿ ಸರ್ಕಾರ ಕರಡು ಮಸೂದೆಯನ್ನು ಪ್ರತಿಪಕ್ಷಗಳ ಸಮಾಧಾನಕ್ಕೆ ತಕ್ಕಂತೆ ಬದಲಾಯಿಸಿತ್ತು. ಈ ಸಲವೂ ನೋಟುಗಳ ನಿಷೇಧ ವಿಷಯದಲ್ಲಿ ಅದೇ ರೀತಿ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಸರ್ಕಾರದ ನಿರ್ಣಯವನ್ನು ಪ್ರತಿಭಟಿಸಲಿವೆ ಎಂದು ಭಾವಿಸುತ್ತೇವೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos