ಚೆನ್ನೈ: 400ಕ್ಕೂ ಅಧಿಕ ಗೀತೆಗಳಿಗೆ ಸಂಗೀತ ಸಂಯೋಜಿಸಿದ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಎಂ.ಬಾಲಮುರಳಿಕೃಷ್ಣ ತಮ್ಮ ಮೊದಲ ಸಾರ್ವಜನಿಕ ಸಂಗೀತ ಕಾರ್ಯಕ್ರಮ ಕೊಟ್ಟಿದ್ದು ಕೇವಲ 8 ವರ್ಷದ ಬಾಲಕನಾಗಿದ್ದಾಗ.
ತಮ್ಮ ಅದ್ವಿತೀಯ ಕಂಠಸಿರಿ, ಶೈಲಿಯಿಂದ ದೇಶಾದ್ಯಂತ ಮನೆಮಾತಾಗಿರುವ ಬಾಲಮುರಳಿಕೃಷ್ಣ, ದೇಶಾದ್ಯಂತ ರೇಡಿಯೋ ಸ್ಟೇಷನ್ ಗಳಲ್ಲಿ ತುಂಬಾ ಹಾಡಿದ್ದರು. ಅವರು 60ರ ದಶಕದಲ್ಲಿ ಹೈದರಾಬಾದ್ ಮತ್ತು ವಿಜಯವಾಡ ರೇಡಿಯೋ ಸ್ಟೇಷನ್ ಗಳಲ್ಲಿ ಸಂಗೀತ ಸಂಯೋಜಕರಾಗಿದ್ದರು. ಅಲ್ಲಿ ಅವರು ಬೆಳಗಿನ ಭಕ್ತಿ ಸಂಗೀತ ಕಾರ್ಯಕ್ರಮ ಭಕ್ತಿ ರಂಜನಿಯನ್ನು ಆರಂಭಿಸಿದರು. ಅದರೊಟ್ಟೊಟ್ಟಿಗೆಯೇ ವಿಜಯವಾಡದ ಸರ್ಕಾರಿ ಸಂಗೀತ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.
ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವ ಕಲೆಯಾದ ಸಂಗೀತವವನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ಠಾಗೊರ್ ರವೀಂದ್ರ ಸಂಗೀತ ಕಾರ್ಯಕ್ರಮದಲ್ಲಿ ಆಹ್ವಾನದ ಮೇರೆಗೆ ಹಾಡಿದ ಏಕೈಕ ದಕ್ಷಿಣ ಭಾರತೀಯ ಸಂಗೀತಗಾರ ಎಂ.ಬಾಲಮುರಳಿಕೃಷ್ಣ.
ವಿಶ್ವಾದ್ಯಂತ 18 ಸಾವಿರಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟ ಇವರು ಭಾರತದಲ್ಲಿ 250ಕ್ಕೂ ಹೆಚ್ಚು ಕ್ಯಾಸೆಟ್ ಗಳನ್ನು ಬಿಡುಗಡೆ ಮಾಡಿದ್ದರು.
ಹಂಸಗೀತೆ ಚಿತ್ರದಲ್ಲಿ ಹಾಡಿದ ಹಾಡಿದ ಉತ್ತಮ ಹಿನ್ನೆಲೆ ಗಾಯಕ ರಾಷ್ಟ್ರ ಪ್ರಶಸ್ತಿ, ಮಧ್ವಾಚಾರ್ಯ ಚಿತ್ರಕ್ಕೆ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸಿಕ್ಕಿರುವುದಲ್ಲದೆ ಅನೇಕ ರಾಜ್ಯ ಪ್ರಶಸ್ತಿಗಳು, ಪದ್ಮ ವಿಭೂಷಣ ಸಂದಿವೆ. ಬಾಲಮುರಳಿಕೃಷ್ಣ ಫ್ರಾನ್ಸ್ ದೇಶದ ಗೌರವ ಷೆವಲಿಯರ್ ಪ್ರಶಸ್ತಿಗೂ ಭಾಜನರಾಗಿದ್ದರು.