ಇಸ್ಲಾಮಾಬಾದ್: ಪಾಕಿಸ್ತಾನದ ವಿಪಕ್ಷಗಳು ಭಾರತದೊಂದಿಗಿನ ವ್ಯಾಪಾರ ವಹಿವಾಟು ಬಾಂಧವ್ಯ ಕಡಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ 10 ನಾಗರಿಕರನ್ನು ಹಾಗೂ ಮೂವರು ಯೋಧರನ್ನು ಭಾರತೀಯ ಸೇನೆ ಹತ್ಯೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ತೆಹ್ರೀಕ್-ಇ-ಇನ್ಸಾಫ್ ನ ಅಧ್ಯಕ್ಷ ಷಾ ಮೆಹಮೂದ್ ಖುರೇಷಿ, ಪಾಕಿಸ್ತಾನ ಸರ್ಕಾರ ತಕ್ಷಣವೇ ಭಾರತದೊಂದಿಗಿನ ವ್ಯಾಪಾರ ವಹಿವಾಟು ಬಾಂಧವ್ಯವನ್ನು ಕಡಿತಗೊಳಿಸಬೇಕು ಎಂದು ಹೇಳಿದ್ದಾರೆ.
ದೇಶವನ್ನು ರಕ್ಷಿಸಲು ಪ್ರಧಾನಿ ನವಾಜ್ ಷರೀಫ್ ಹಾಗೂ ರಕ್ಷಣಾ ಸಚಿವ ಖವಾಜಾ ಅಸೀಫ್ ಗಡಿಯಲ್ಲಿರಬೇಕಿತ್ತು. ಆದರೆ ಅವರಿಗೆ ಭಾರತದೊಂದಿಗಿನ ಬಾಂಧವ್ಯ ಮುಖ್ಯವಾಗಿದೆ ಎಂದು ಖುರೇಷಿ ಆರೋಪಿಸಿದ್ದಾರೆ. ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶದಲ್ಲಿ ಸೀಮಿತ ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಪಾಕ್ ಸೇನೆ ಗಡಿಯಲ್ಲಿ ದಾಳಿ ನಡೆಸಲು ಪ್ರಾರಂಭಿಸಿದೆ. ಪಾಕ್ ಸೇನೆಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ಪಾಕಿಸ್ತಾನದ ಮೂವರು ಯೋಧರನ್ನು ಹೊಡೆದುರುಳಿಸಿದೆ.