ಅಬ್ದುಲ್ ಕಲಾಂ ಅವರ ಹಿರಿಯ ಸಹೋದರ ಮುತ್ತುಮೀರನ್ ಮರೈಕಯರ್ ಅವರು ಭೂಮಿ ಪೂಜೆ ನೆರವೇರಿಸಿ, 'ಮಿಸೈಲ್ ಮ್ಯಾನ್' ಗೆ ಪುಷ್ಪನಮನ ಸಲ್ಲಿಸಿದರು.
ರಾಮೇಶ್ವರಂ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಶಸ್ತಿ ವಿಜೇತ ಹಾಗೂ 'ಮಿಸೈಲ್ ಮ್ಯಾನ್' ಡಾ. ಎ.ಪಿ.ಜೆ.ಅಬ್ದುಲ್ ಕಲಾಂ 85ನೇ ಹುಟ್ಟುಹಬ್ಬದ ದಿನವಾದ ಶನಿವಾರ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ರಾಮೇಶ್ವರಂ ನಲ್ಲಿ ಅಬ್ದುಲ್ ಕಲಾಂ ಅವರ ಹಿರಿಯ ಸಹೋದರ ಮುತ್ತುಮೀರನ್ ಮರೈಕಯರ್ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಲಾಂ ಕುಟುಂಬದ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಮಾರಕ ಕಾಮಗಾರಿ ಪರಿಶೀಲಿಸಲು ಶುಕ್ರವಾರ ಡಿಆರ್ಡಿಒದ ಅಧಿಕಾರಿಗಳ ತಂಡ ರಾಮೇಶ್ವರಂಗೆ ಭೇಟಿ ನೀಡಿತ್ತು. ಸ್ಥಳೀಯ ಅಧಿಕಾರಿಗಳೊಂದಿಗೆ ಕಾಮಗಾರಿಯ ಸಿದ್ಧತೆಗಳ ಕುರಿತು ಚರ್ಚೆ ನಡೆಸಿತ್ತು.
ಕೇಂದ್ರ ಸರ್ಕಾರ ಸ್ಮಾರಕ ನಿರ್ಮಾಣಕ್ಕಾಗಿ 50 ಕೋಟಿ ರುಪಾಯಿ ಮಂಜೂರು ಮಾಡಿದೆ. ಮೊದಲ ಹಂತದಲ್ಲಿ 15 ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಒಟ್ಟು 27 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ಡಿಆರ್ಡಿಒ ತಂಡದ ಸದಸ್ಯ ಪಿ.ಕೆ.ಸಿಂಗ್ ತಿಳಿಸಿದ್ದಾರೆ.
ಸ್ಮಾರಕ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. 2017ರ ಜುಲೈ 27ರಂದು ಕಲಾಂ ಅವರ 2ನೇ ಪುಣ್ಯತಿಥಿಯ ಸಂದರ್ಭದಲ್ಲಿ ಸ್ಮಾರಕವನ್ನು ಉದ್ಘಾಟಿಸಲು ಯೋಜಿಸಿದ್ದೇವೆ. ಎರಡನೇ ಹಂತದಲ್ಲಿ ಜ್ಞಾನ ಕೇಂದ್ರದ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos