ಅಹಮದಾಬಾದ್: ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿ ನಡೆಸಲು ಆದೇಶ ನೀಡುವುದರ ಹಿಂದೆ ‘ಆರ್ಎಸ್ಎಸ್ನ ಬೋಧನೆಗಳು’ ಪ್ರೇರಣೆಯಾಗಿರುವ ಸಾಧ್ಯತೆಗಳಿವೆ ಎಂಬ ಸೂಚನೆಯನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ನೀಡಿದ್ದಾರೆ.
ನಿರ್ಮ ಯುನಿವರ್ಸಿಟಿ ಆಯೋಜಿಸಿದ್ದ ' Know My Army' ಎಂಬ ಕಾರ್ಯಕ್ರಮದಲ್ಲಿ ಮಾತನಾಜಡಿದ ಅವರು, ಮಹಾತ್ಮ ಗಾಂಧಿಯ ರಾಜ್ಯದಿಂದ ಬಂದ ಪ್ರಧಾನಿ, ನಿರ್ದಿಷ್ಟ ದಾಳಿಯನ್ನು ಎಂದೂ ನೋಡದ ಗೋವಾದ ನಾನು ರಕ್ಷಣಾ ಸಚಿವ, ಈ ಇಬ್ಬರು ಸೇರಿಕೊಂಡಾಗ ನಿರ್ದಿಷ್ಟ ದಾಳಿ ನಡೆದಿದೆ. ಬಹುಶಃ ಇದಕ್ಕೆ ಕಾರಣ ಆರ್ಎಸ್ಎಸ್ನ ಬೋಧನೆ ಇರಬೇಕು. ಆದರೆ ನಮ್ಮಿಬ್ಬರ ಸೇರುವಿಕೆ, ಬೇರೆಯದೇ ಮಾದರಿಯದ್ದು ಪರಿಕ್ಕರ್ ತಿಳಿಸಿದ್ದಾರೆ.
ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರನ್ನು ಟೀಕಿಸಿದ ಪರಿಕ್ಕರ್, ಸೇನೆಯ ಕಾರ್ಯಾಚರಣೆಯು ರಾಷ್ಟ್ರದ ಭದ್ರತೆ ಬಗ್ಗೆ ದೇಶದ ಜನರಲ್ಲಿ ಸಂವೇದನಾಶೀಲತೆಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯ ಪಟ್ಟರು.
ನಿರ್ದಿಷ್ಟ ದಾಳಿಯ ನಂತರ ಒಳ್ಳೆಯ ಬೆಳವಣಿಗೆಗಳೂ ನಡೆದಿವೆ. ಕೆಲವು ರಾಜಕಾರಣಿಗಳನ್ನು ಹೊರತುಪಡಿಸಿದರೆ, ಪ್ರತಿ ಭಾರತೀಯನೂ ಧೈರ್ಯಶಾಲಿ ಯೋಧರ ಬೆಂಬಲಕ್ಕೆ ನಿಂತಿದ್ದಾನೆ’ ಎಂದು ಪರಿಕ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.