ನವದೆಹಲಿ: ಭಾರತ ನೈತಿಕ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವ ಬದಲು ವಾಸ್ತವವನ್ನು ಅರಿತು ನಿರ್ಧಾರ ಕೈಗೊಂಡಿದ್ದಿದ್ದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದಾಗಿರುತ್ತಿತ್ತು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರುಪ್ ರಹ ಅಭಿಪ್ರಾಯಪಟ್ಟಿದ್ದಾರೆ.
ಭಾರತ-ಪಾಕಿಸ್ತಾನ ಯುದ್ಧದ ವೇಳೆ ಭಾರತ ಸರ್ಕಾರ ವಾಯುಪಡೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿಲ್ಲ, ಒಂದು ವೇಳೆ ಬಳಸಿಕೊಂಡಿದ್ದಿದ್ದರೆ ಇಂದು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ ಭಾರತದೊಂದಿಗೆ ಇರುತ್ತಿತ್ತು ಎಂದು ಅರುಪ್ ರಹ ತಿಳಿಸಿದ್ದಾರೆ.
1971 ರಲ್ಲಿ ನಡೆದ ಭಾರತ- ಪಾಕಿಸ್ತಾನ ಯುದ್ಧದ ವರೆಗೂ ಭಾರತ ಸರ್ಕಾರ ವಾಯುಪಡೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿಲ್ಲ. ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮುಳ್ಳಾಗಿದೆ. ಭಾರತ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಬದಲು ಸೇನೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ಅರುಪ್ ರಹ ಅಭಿಪ್ರಾಯಪಟ್ಟಿದ್ದಾರೆ.
ಘರ್ಷಣೆಯ ಭಯದಿಂದ 1962 ರ ಯುದ್ಧದಲ್ಲಿ ಭಾರತ ಸರ್ಕಾರ ವಾಯುಪಡೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿರಲಿಲ್ಲ. ಪೂರ್ವ ಪಾಕಿಸ್ತಾನದಲ್ಲಿ ಅಲ್ಲಿನ ವಾಯು ಪಡೆ ಭಾರತದ ಮೇಲೆ ದಾಳಿ ನಡೆಸುತ್ತಿದ್ದರೂ, ಭಾರತ ತನ್ನ ವಾಯುಸೇನೆಯನ್ನು ಬಳಸಿಕೊಳ್ಳಲಿಲ್ಲ ಎಂದು ಅರುಪ್ ರಹ ಹೇಳಿದ್ದು, 1971 ರ ಯುದ್ಧದಲ್ಲಿ ಮೊದಲ ಬಾರಿಗೆ ವಾಯುಪಡೆಯನ್ನು ಬಳಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.