ದೇಶ

2014 ರಲ್ಲಿ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲು ಯೋಚಿಸಿದ್ದೆ, ರಾಷ್ಟ್ರಹಿತ ದೃಷ್ಟಿಯಿಂದ ಹಿಂದೆ ಸರಿದೆ: ಮೋದಿ

Srinivas Rao BV

ನವದೆಹಲಿ: "ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಭಾರತೀಯ ಆರ್ಥಿಕತ ಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂಬ ಆಲೋಚನೆ ಮೂಡಿತ್ತು ಆದರೆ ರಾಷ್ಟ್ರದ ಹಿತದೃಷ್ಟಿಯಿಂದ ಶ್ವೇತಪತ್ರ ಹೊರಡಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಿಎನ್ ಎನ್- ನ್ಯೂಸ್ 18 ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ,   2014 ರಲ್ಲಿ  ಹೊಸ ಸರ್ಕಾರ ರಚನೆಯಾದಾಗ ದೇಶದ ಆರ್ಥಿಕ ಸ್ಥಿತಿ ಜನತೆ ಅಂದುಕೊಂಡಿದ್ದಕ್ಕಿಂತ ಕೆಟ್ಟದಾಗಿತ್ತು. ಒಂದು ವೇಳೆ ದೇಶದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿದ್ದಿದ್ದರೆ ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಆರ್ಥಿಕ ಬೆಳವಣಿಗೆ ವೇಗ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗಿರುತ್ತಿತ್ತು, ರಾಷ್ಟ್ರಹಿತದ ದೃಷ್ಟಿಯಿಂದ ಶ್ವೇತ ಪತ್ರ ಹೊರಡಿಸದೆ ಇರಲು ತೀರ್ಮಾನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶ್ವೇತ ಪತ್ರ ಹೊರಡಿಸುವುದರಿಂದ ಬಿಜೆಪಿಗೆ ರಾಜಕೀಯವಾಗಿ ಲಾಭವಾಗುತ್ತಿತ್ತೇನೋ ಆದರೆ ಹಾಗೆ ಮಾಡಿದಿದ್ದರೆ ಹೂಡಿಕೆ, ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಉಂಟಾಗಿ ರಾಷ್ಟ್ರಹಿತಕ್ಕೆ ಧಕ್ಕೆಯಾಗುತ್ತಿತ್ತು, ರಾಜಕೀಯ ಲಾಭದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳದೆ ರಾಷ್ಟ್ರಹಿತ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಯಿತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.      
ಇನ್ನು ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ ದಲಿತರ ಸ್ವಯಂನಿಯುಕ್ತ ಪೋಷಕರು ಓಟ್ ಬ್ಯಾಂಕ್ ಗಾಗಿ ಹಳೆಯ ಸಾಮಾಜಿಕ ಸಮಸ್ಯೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಅಂಥವರಿಗೆ ನಾನು ದಲಿತರ ಪರವಾಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿದ್ದಾರೆ. ಆದರೆ ಅದನ್ನೇ ರಾಜಕೀಯ ದಾಳವನ್ನಾಗಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಸರ್ಕಾರ 125 ನೇ ವರ್ಷದ ಅಂಬೇಡ್ಕರ್ ಜಯಂತಿ ಅಂಗವಾಗಿ  'ಅಂಬೇಡ್ಕರ್‌ ಅವರಿಗೆ ಸಂಬಂಧಪಟ್ಟ ಐದು ಪ್ರದೇಶಗಳನ್ನು 'ಪಂಚ ತೀರ್ಥ ಸ್ಥಳ'ವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ನಾನು ದಲಿತರೊಂದಿಗೆ ಇರುವುದನ್ನು ಸ್ವಯಂನಿಯುಕ್ತ ಪೋಷಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT