ನವದೆಹಲಿ: ಪ್ರಾಥಮಿಕ ಶಾಲಾ ಪಠ್ಯಪುಸ್ತಕದ ಲೇಖಕರು ಪುಸ್ತಕಗಳನ್ನು ಹಣ ಸಂಪಾದಿಸಲು ಬರೆಯುತ್ತಾರೆ. ಅವರು ಮಕ್ಕಳ ಆಸಕ್ತಿ, ಸಾಮರ್ಥ್ಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಹೀಗೆಂದು ಸರ್ಕಾರದಿಂದ ನೇಮಕಗೊಂಡ ತಜ್ಞರ ತಂಡ ಹೇಳಿದೆ.
ಪ್ರಾಥಮಿಕ ಹಂತದ ಪಠ್ಯಪುಸ್ತಕಗಳಲ್ಲಿ ನ್ಯೂನತೆ ಮತ್ತು ಕೊರತೆಯನ್ನು ಕಂಡುಹಿಡಿದಿದ್ದು, ಪುಸ್ತಕಗಳನ್ನು ಬರೆದು ಸಂಪಾದಿಸಿದ ಲೇಖಕರನ್ನು ಜವಾಬ್ದಾರರನ್ನಾಗಿ ಮಾಡಬೇಕೆಂದು ಅದು ಹೇಳಿದೆ.
ಪಠ್ಯಪುಸ್ತಕಗಳ ಲೇಖಕರು ಒಂದು ಪ್ಯಾರಾಗ್ರಾಫನ್ನು ಒಂದು ಪುಸ್ತಕದಿಂದ ಮತ್ತು ಇನ್ನೊಂದು ಪ್ಯಾರಾಗ್ರಾಫ್ ನ್ನು ಇನ್ನೊಂದು ಪುಸ್ತಕದಿಂದ ಕದಿಯುತ್ತಾರೆ. ಮಾರುಕಟ್ಟೆಯಲ್ಲಿ ಪುಸ್ತಕಗಳ ಸಂಖ್ಯೆಯ ಹೆಸರಿನಲ್ಲಿ ಪಠ್ಯಪುಸ್ತಕಗಳು ಮೂಲ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಕೆಲ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆಲ್ಲಾ ಪುಸ್ತಕಗಳು ಗುಣಮಟ್ಟದಲ್ಲಿ ಕಳಪೆಯಾಗಿರುತ್ತವೆ. ಅವುಗಳ ಕಾಗದ ಹಾಳೆಗಳು, ಪ್ರಿಂಟಿಂಗ್ ಗುಣಮಟ್ಟ ಸಹ ಕೆಳ ಮಟ್ಟದ್ದಾಗಿರುತ್ತದೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಪಠ್ಯದ ವಿಷಯಗಳನ್ನು ನೋಡುವ ಗುಣಮಟ್ಟ, ಭಾಷಾ ಬಳಕೆಯಲ್ಲಿ ಕೂಡ ತಪ್ಪು ಇರುತ್ತದೆ. ಬಿಹಾರ ಸರ್ಕಾರದ ಪ್ರಾಥಮಿಕ ಶಾಲೆಯ ಗಣಿತ, ಇಂಗ್ಲೀಷ್ ಮತ್ತು ಹಿಂದಿ ಭಾಷಾ ವಿಷಯಗಳ ಪಠ್ಯಪುಸ್ತಕಗಳು ಕಳಪೆ ಮಟ್ಟದ್ದಾಗಿವೆ. ಎನ್ ಸಿಇಆರ್ ಟಿ ಸ್ಥಾಪಿಸಿದ ತಂಡ ನಡೆಸಿದ ಅಧ್ಯಯನದಿಂದ ಈ ವಿಷಯ ಬೆಳಕಿಗೆ ಬಂದಿದೆ.
ಪಠ್ಯಪುಸ್ತಕಗಳನ್ನು ತಯಾರಿಸುವವರು ಉತ್ತಮ ಜ್ಞಾನವುಳ್ಳ, ಅರ್ಹತೆಯಿರುವ ಮತ್ತು ಅನುಭವಿಗಳಾಗಿರಬೇಕು. ಮಕ್ಕಳು ಹೇಗೆ, ಯಾವುದನ್ನು ಕಲಿಯಬಹುದು ಮೊದಲಾದವುಗಳನ್ನು ನೋಡಬೇಕು. ಪಠ್ಯಪುಸ್ತಕಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿರುತ್ತದೆ. ಪ್ರಾಥಮಿಕ ಹಂತಗಳಲ್ಲಿ ವಿದ್ಯಾರ್ಥಿಗಳು ಬೌದ್ಧಿಕವಾಗಿ ಸಾಕಷ್ಟು ಬೆಳೆಯದಿರುವುದರಿಂದ ಶಾಲಾ ಪಠ್ಯಪುಸ್ತಕಗಳ ಗುಣಮಟ್ಟ ಚೆನ್ನಾಗಿರುವ ಅವಶ್ಯಕತೆಯಿದೆ. ಪಠ್ಯಪುಸ್ತಕಗಳು ಚಾರ್ಟ್, ಪಟ್ಟಿ, ಚಿತ್ರಗಳನ್ನು ಹೊಂದಿರಬೇಕು. ಪಠ್ಯಪುಸ್ತಕಗಳು ಯಾವುದೇ ಸಮುದಾಯ, ಜಾತಿ, ಧರ್ಮದ ಬಗ್ಗೆ ಅವಹೇಳನವಾಗಿ ಬರೆಯಬಾರದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos