ನವದೆಹಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಶುಕ್ರವಾರ ಔಪಚಾರಿಕವಾಗಿ ಅಧಿಸೂಚನೆ ಹೊರಡಿಸಿದ್ದು, ಈ ಮಂಡಳಿ ಹೊಸ ತೆರಿಗೆ ದರವನ್ನು ನಿರ್ಧರಿಸಲಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ನೇತೃತ್ವದ ಈ ಮಂಡಳಿ ರಚನೆಯಾಗುತ್ತಿದ್ದು, ದೇಶದ ಎಲ್ಲಾ 29 ರಾಜ್ಯಗಳ ಹಣಕಾಸು ಸಚಿವರು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಈ ಮಂಡಳಿಯ ಸದಸ್ಯರಾಗಿರುತ್ತಾರೆ.
ಹೊಸ ತೆರಿಗೆ ನೀತಿ ಹೇಗೆ ಕಾರ್ಯ ನಿರ್ವಹಿಸುತ್ತದೆ, ಜಿಎಸ್’ಟಿ ತೆರಿಗೆ ದರ ಸೇರಿದಂತೆ ಬೇರೆ ಬೇರೆ ವಿಚಾರಗಳನ್ನು ನಿರ್ಧರಿಸುವ ಜವಾಬ್ದಾರಿ ಸರಕು ಮತ್ತು ಸೇವಾ ತೆರಿಗೆ ಮಂಡಳಿ(ಜಿಎಸ್ ಟಿ) ಮೇಲಿದೆ.
ಏಪ್ರಿಲ್ 1, 2017 ರಿಂದ ಜಿಎಸ್’ಟಿ ಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸರಕು ಮತ್ತು ಸೇವಾ ತೆರಿಗೆಗೆ ಜಾರಿಗೆ ಒಪ್ಪಿಗೆ ನೀಡಿದ ನಂತರ ಸೆಪ್ಟೆಂಬರ್ 12ರಂದು ಕೇಂದ್ರ ಸಚಿವ ಸಂಪುಟ ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಅನುಮೋದನೆ ನೀಡಿತ್ತು.