ದೇಶ

ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಆಪ್ ಶಾಸಕ ಸೋಮನಾಥ್ ಭಾರ್ತಿಗೆ ಜಾಮೀನು

Lingaraj Badiger
ನವದೆಹಲಿ: ದೆಹಲಿಯ ಏಮ್ಸ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಗುರುವಾರ ಬೆಳಗ್ಗೆ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಹಾಗೂ ಹಾಲಿ ಆಪ್ ಶಾಸಕ ಸೋಮನಾಥ್ ಭಾರ್ತಿ ಅವರಿಗೆ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕಳೆದ ತಿಂಗಳು ದೆಹಲಿ ಏಮ್ಸ್ ಕಾಲೇಜು ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಸೋಮನಾಥ್ ಭಾರ್ತಿ ಮತ್ತು ಅವರ ಸಂಗಡಿಗರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪದ ಮೇಲೆ  ಇಂದು ಬೆಳಗ್ಗೆ ಅವರನ್ನು ಬಂಧಿಸಿ, ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದರು.
ವಿಚಾರಣೆ ನಡೆಸಿದ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಅನುಜ್ ಅಗರವಾಲ್ ಅವರು, ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂಬ ದೆಹಲಿ ಪೊಲೀಸರ ಮನವಿಯನ್ನು ತಳ್ಳಿಹಾಕಿ, ಭಾರ್ತಿ ಜಾಮೀನು ಅರ್ಜಿಗೆ ಅವಕಾಶ ನೀಡಿದರು. 
'ಅವರು ಒಬ್ಬ ಶಾಸಕರು ಹಾಗೂ ಬಾರ್ ಕೌನ್ಸಿಲ್ ಸದಸ್ಯರೂ ಆಗಿದ್ದು, ಈ ಪ್ರಕರಣದಲ್ಲಿ ಅವರು ಜಾಮೀನಿಗೆ ಅರ್ಹರಾಗಿದ್ದಾರೆ ಎಂದು ಕೋರ್ಟ್ ಆಪ್ ಶಾಸಕನಿಗೆ ಜಾಮೀನು ನೀಡಿದೆ. ಅಲ್ಲದೆ ತನಿಖೆಗೆ ಸಹಕರಿಸುವಂತೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ' ಸೂಚಿಸಿದೆ.
ಹಲ್ಲೆ ಸಂಬಂಧ ಮೂರು ವಾರಗಳ ಹಿಂದೆಯೇ ಸೋಮನಾಥ್ ಭಾರ್ತಿ ವಿರುದ್ಧ ದೆಹಲಿಯ ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
SCROLL FOR NEXT