ನವದೆಹಲಿ: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಗೆ ವಿಧಿಸಲಾಗಿರುವ ಅನಿರ್ಧಾಷ್ಟವಾಧಿ ನಿಷೇಧವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಏರ್ ಇಂಡಿಯಾಗೆ ಸೂಚಿಸುವ ಸಾಧ್ಯತೆ ಇದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು ಹಾಗೂ ಶಿವಸೇನಾ ಸಂಸದ ಅನಂತ್ ಗೀತೆ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಾಯಕ್ವಾಡ್ ಅವರು ಏರ್ ಇಂಡಿಯಾ ಸಿಬ್ಬಂದಿಗೆ ಬೇಷರತ್ ಕ್ಷಮೆ ಕೇಳಲು ಮುಂದಾಗಿದ್ದು, ಕ್ಷಮೆ ಕೇಳಿದ ನಂತರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಶಿವಸೇನಾ ಸಂಸದನಿಗೆ ವಿಧಿಸಿದ್ದ ನಿಷೇಧವನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆಯಷ್ಟೆ ಲೋಕಸಭೆಯಲ್ಲಿ ನಿಷೇಧ ಹಿಂಪಡೆಯಲು ನಿರಾಕರಿಸಿದ್ದ ಅಶೋಕ್ ಗಜಪತಿ ರಾಜು ಅವರಿಗೆ ಶಿವಸೇನಾ ಸಂಸದರು ಮುತ್ತಿಗೆ ಹಾಕಿದ್ದರು. ಆದರೆ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ಎಸ್.ಎಸ್. ಅಹ್ಲುವಾಲಿಯಾ ಅವರು ಗಜಪತಿ ರಾಜು ಅವರನ್ನು ಸೇನಾ ಸಂಸದರಿಂದ ರಕ್ಷಿಸಿದ್ದರು.