ಸಾವನ್ನು ಗೆದ್ದು ಬಂದ ವೀರ ಯೋಧ ಚೇತನ್ ಚೀತಾ
ನವದೆಹಲಿ: ಕಾಶ್ಮೀರದದಲ್ಲಿ ಉಗ್ರರ ಜತೆ ನಡೆದ ಕಾಳದಲ್ಲಿ 9 ಗುಂಡುಗಳಿಗೆ ಎದೆಗೊಟ್ಟು ಗಂಭೀರವಾಗಿ ಗಾಯಗೊಂಡು ಸಾವನ್ನು ಗೆದ್ದು ಬಂದಿದ್ದ ವೀರ ಯೋಧ ಚೇತನ್ ಚೀತಾ ಅವರು ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಫೆ.14ರಂದು ಕಾಶ್ಮೀರದಲ್ಲಿ ಉಗ್ರರು ಹಾಗೂ ಸಿಆರ್ ಪಿಎಫ್ ಯೋಧರ ನಡುವೆ ಗುಂಡಿನ ಕಾಳಗ ನಡೆದಿತ್ತು. ಈ ವೇಳೆ ರಾಜಸ್ತಾನ ಮೂಲದ ಕಮಾಂಡಿಂಗ್ ಆಫೀಸರ್ ಚೇತನ್ ಚೀನಾ ಅವರ ಮೆದುಳು, ಬಲಗಣ್ಣು, ಹೊಟ್ಟೆ, ತೋಳುಗಳು, ಎಡಗೈ, ಪೃಷ್ಠಕ್ಕೆ ಗುಂಡೇಟು ತಗುಲಿತ್ತು.
ಚಿಂತಾಜನಕ ಸ್ಥಿತಿಯಲ್ಲಿದ್ದ ಚೇತನ್ ಅವರಿಗೆ ಶ್ರೀನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಚೀತಾ ಅವರ ತಲೆಬುರುಡೆಯ ಒಂದು ಭಾಗವನ್ನೇ ತೆಗೆದು ಹಾಕಿದ್ದರು. ಜನತೆಗೆ ಹಲವು ಶಸ್ತ್ರಚಿಕಿತ್ಸೆ ನಡೆಸಿದ್ದರು. ಬರೋಬ್ಬರಿ 2 ತಿಂಗಳ ಕಾಲ ಕೋಮಾದಲ್ಲಿದ್ದ ಚೇತನ್ ಅವರಿಗೆ 1 ತಿಂಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಪವಾಡ ಸದೃಶ ಎಂಬಂತೆ ಚೇತನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಚೇತನ್ ಅವರ ಆರೋಗ್ಯ ಕುರಿತಂತೆ ಏಮ್ಸ್ ಆಸ್ಪತ್ರೆಯ ವೈದ್ಯರು ಮಾತನಾಡಿದ್ದು, ಈಗಲೂ ಚೇತನ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಳನ್ನು ಮುಂದುವರೆಸಲಾಗುತ್ತಿದೆ.ಫಿಸಿಯೋಥೆರಪಿ ಮತ್ತು ಸ್ಪೀಚ್ ಥೆರಪಿಗಳನ್ನು ಮಾಡಲಾಗುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಅವರು ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆಂದು ಹೇಳಿದ್ದಾರೆ.
ಚೇತನ್ ಅವರ ಪತ್ನಿ ಪ್ರತಿಕ್ರಿಯೆ ನೀಡಿದ್ದು, ಶ್ರೀನಗರ ವಿಮಾನ ನಿಲ್ದಾಣದಿಂದ ಏರ್ ಆ್ಯಂಬುಲೆನ್ಸ್ ಮೂಲಕ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆವರ ಕಣ್ಣುಗಳು ಮುಚ್ಚಿದ್ದವು. ಸಂಪೂರ್ಣವಾಗಿ ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ಆದರೆ, ಅವರು ಉಸಿರಾಡುತ್ತಿರುವುದು ಮಾತ್ರ ತಿಳಿದಿತ್ತು. ಬದುಕಿ ಬರುತ್ತಾರೆಂಬ ವಿಶ್ವಾಸವಿತ್ತು. ಪತಿ ಕೋಮಾಗೆ ಹೋಗಿದ್ದಾರೆಂದು ವೈದ್ಯರು ಹೇಳಿದ್ದರು. ಪತಿಯನ್ನು ನೋಡಲು ಬಂದಾಗಲೆಲ್ಲಾ ಅವರ ಕೈಗಳನ್ನು ಹಿಡಿದು ಮಾತನಾಡುತ್ತಿದ್ದೆ. ನಾನು ಮಾತನಾಡಿದಾಗ ಅವರ ಕೈಬೆರಳುಗಳು ಪ್ರತಿಕ್ರಿಯೆ ನೀಡುತ್ತಿರುವುದು ನನ್ನ ಗಮನಕ್ಕೆ ಬರುತ್ತಿತ್ತು. ಇದು ನನ್ನಲ್ಲಿರುವ ನಂಬಿಕೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಇದೀಗ ನನ್ನ ಪತಿ ಸಾವನ್ನು ಗೆದ್ದು ಬಂದಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos