ನವದೆಹಲಿ: ಮಾರ್ಚ್ 26 ರಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಖಿನ್ನತೆ ಬಗ್ಗೆ ಮಾತನಾಡಿದ್ದರು. ಮಾನಸಿಕ ಖಿನ್ನತೆಯಿಂದ ಹೊರಬರಲು ಜನರು ತಮ್ಮ ಭಾವನೆಗಳನ್ನು ತಮಗೆ ಹತ್ತಿರವಾದವರ ಬಳಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.
ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ನಿಮ್ಮೆಲ್ಲರಿಗೂ ಅದ್ಫುತ ಆರೋಗ್ಯ ನೀಡಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ವಿಶ್ವ ಆರೋಗ್ಯದ ದಿನವಾದ ಇಂದು ದೇಶದ ಎಲ್ಲರೂ ಉತ್ತಮ ಆರೋಗ್ಯ ಹೊಂದಬೇಕು ಎಂದು ಹಾರೈಸಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ನಾಗರಿಕ ಸ್ನೇಹಿಯಾಗಿದೆ ಎಂದು ಹೇಳಿದ್ದಾರೆ.
ಮನ್ ಕೀ ಬಾತ್ ನಲ್ಲಿ ಖಿನ್ನತೆ ಬಗ್ಗೆ ವಿವರಣೆ ನೀಡಿದ್ದ ಮೋದಿ, ಡಿಪ್ರೆಶನ್ ನಿಂದ ಬಳಲುತ್ತಿರುವವರು ಎಕ್ಸ್ ಪ್ರೆಶನ್ ಮೊರೆ ಹೋದರೇ, ಅಂದರೆ ತಮಗೆ ಆತ್ಮೀಯರಾದವರ ಬಳಿ ತಮ್ಮ ಮನಸ್ಸಿನ ನೋವುಗಳನ್ನು ಹಂಚಿಕೊಂಡರೇ ಖಿನ್ನತೆಯಿಂದ ಹೊರಬರಬಹುದು ಎಂದು ತಿಳಿಸಿದ್ದರು. ಪ್ರತಿ ವರ್ಷದ ಏಪ್ರಿಲ್ 7ನೇ ತಾರೀಖನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ.