ಕೋಲ್ಕತ್ತಾ: ರಾಮನವಮಿ ಹಬ್ಬದಂದು ಪಶ್ಚಿಮ ಬಂಗಾಳದಲ್ಲಿ ನಡೆದ ರ್ಯಾಲಿಯಲ್ಲಿ ಖಡ್ಗ, ತ್ರಿಶೂಲ ಹಿಡಿದಿದ್ದ ಬಿಜೆಪಿ ಮುಖಂಡರ ವಿರುದ್ಧ ಸರ್ಕಾರ ಪ್ರಕರಣ ದಾಖಲಿಸಿರುವುದಕ್ಕೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ವಿರೋಧ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆರೋಪ ಮಾಡಿರುವ ಕಿರಣ್ ರಿಜಿಜು, ರಾಜ್ಯದಲ್ಲಿ ಮಮತಾ ಬ್ಯಾನರ್ಜಿ ಸರ್ವಾಧಿಕಾರತ್ವ ನಡೆಸುತ್ತಿದ್ದಾರೆ. ರಾಜಕೀಯ ವಿರೋಧಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿರಣ್ ರಿಜಿಜು ಆರೋಪಿಸಿದ್ದಾರೆ.
ರಾಮನವಮಿ ಹಬ್ಬದಂದು ಪಶ್ಚಿಮ ಬಂಗಾಳದಲ್ಲಿ ನಡೆದ ರ್ಯಾಲಿಯಲ್ಲಿ ಬಿಜೆಪಿ ಮುಖಂಡರು, ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳನ್ನು ಹಿಡಿದಿರಲಿಲ್ಲ. ಬದಲ್ಲಾಗಿ ಖಡ್ಗ, ತ್ರಿಶೂಲವನ್ನು ಹಿಡಿದಿದ್ದರು, ಖಡ್ಗ, ತ್ರಿಶೂಲ ಸಾಂಸ್ಕೃತಿ ಹಾಗೂ ಸಾಂಕೇತಿಕ ಶಸ್ತ್ರಗಳಷ್ಟೇ ಎಂದು ಕಿರಣ್ ರಿಜಿಜು ಸಮರ್ಥನೆ ನೀಡಿದ್ದು, ರಾಜಕೀಯ ವೈರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮಮತಾ ಬ್ಯಾನರ್ಜಿ ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು ಮಮತಾ ಬ್ಯಾನರ್ಜಿ ಸರ್ವಾಧಿಕಾರತ್ವ ನಡೆಸುತ್ತಿದ್ದಾರೆ ಎಂದು ಕಿರಣ್ ರಿಜಿಜು ಆರೋಪಿಸಿದ್ದಾರೆ.