ಶ್ರೀರಾಮನ ವಿರುದ್ಧ ಫೇಸ್ಬುಕ್'ನಲ್ಲಿ ಪೋಸ್ಟ್: ಒಡಿಶಾದಲ್ಲಿ ತಾರಕ್ಕೇರಿದ ಪ್ರತಿಭಟನೆ, ಸೆಕ್ಷನ್ 144 ಜಾರಿ
ಭುವನೇಶ್ವರ: ಸಾಮಾಜಿಕ ಜಾಲತಾಣ ಫೇಸ್'ಬುಕ್'ನಲ್ಲಿ ಶ್ರೀರಾಮನ ವಿರುದ್ಧ ಪೋಸ್ಟ್ ಹಾಕಿದ ಪರಿಣಾಮ ಒಡಿಶಾದ ಭದ್ರತ್ ಜಿಲ್ಲೆಯಲ್ಲಿ ಪ್ರತಿಭಟನೆ ತಾರಕ್ಕೇರಿದ್ದು, ಈ ಹಿನ್ನಲೆಯಲ್ಲಿ ರಾಜ್ಯದ ಹಲವೆಡೆ ಅಧಿಕಾರಿಗಳು ಸೆಕ್ಷನ್ 144 ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
ಫೇಸ್ ಬುಕ್ ನಲ್ಲಿ ಮರ್ಯಾದ ಪುರುಷ ಶ್ರೀರಾಮನ ವಿರುದ್ಧ ಪೋಸ್ಟ್ ಗಳು ಕಂಡು ಬಂದ ಹಿನ್ನಲೆಯಲ್ಲಿ ಒಡಿಶಾದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿದ್ದವು. ಈ ಪ್ರತಿಭಟನೆ ತಾರಕ್ಕೇರಿದ ಹಿನ್ನಲೆಯಲ್ಲಿ ಭದ್ರಕ್, ಧಮ್ನಗರ ಹಾಗೂ ಬಸುದೇವ್ಪುರದಲ್ಲಿ ನಿನ್ನೆ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ನಿಷೇಧಾಜ್ಞೆ ಇಂದೂ ಕೂಡ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.
ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಈಗಾಗಲೇ ಒಡಿಶಾದಾದ್ಯಂತ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ಹಾಗೂ ಹಿಂಸಾಚಾರ ಸಂಬಂಧ ಪೊಲೀಸರು ಈ ವರೆಗೂ 10 ಜನರನ್ನು ಬಂಧನಕ್ಕೊಳಪಡಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಭದ್ರಕ್ ಜನತೆ ಸಮಾಧಾನದಿಂದ ಇರಬೇಕೆಂದು ಮನವಿ ಮಾಡಿದ್ದಾರೆ.
ಡಿಜಿಪಿ ಕೆ.ಬಿ.ಸಿಂಗ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪ್ರತಿಭಟನೆ ವೇಳೆ ಹಲವು ಅಂಗಡಿಗಳಲ್ಲಿ ದರೋಡೆ ಮಾಡಲಾಗಿದೆ. ದೊಡ್ಡ ಮಟ್ಟದಲ್ಲಿ ಹಿಂಸಾಚಾರಗಳಾವುದೂ ನಡೆದಿಲ್ಲ. ಸಾವು-ನೋವುಗಳು ಸಂಭವಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳು ಹಾಗೂ ವದಂತಿಗಳಿಗೆ ಜನರು ಪ್ರತಿಕ್ರಿಯೆಗಳನ್ನು ನೀಡಬಾರದು. ರಾಜ್ಯದಲ್ಲಿ ಶಾಂತಿ ಕಾಪಾಡಲು ಜನರು ಆಡಳಿತ ಮಂಡಳಿಗಳಿಗೆ ಸಹಾಯ ಮಾಡಬೇಕೆಂದು ಹೇಳಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಾತನಾಡಿ, ಜನತೆ ತಾಳ್ಮೆ ಹಾಗೂ ಸಮಾಧಾನದಿಂದ ಇರಬೇಕಿದೆ. ರಾಜ್ಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಶಾಂತಿಯವನ್ನು ಕದಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos